ದೇಶ

ಟ್ರಕ್ ಅಪಘಾತದಲ್ಲಿ 24 ವಲಸೆ ಕಾರ್ಮಿಕರ ಸಾವು:ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ ಯೋಗಿ ಸರ್ಕಾರ

Sumana Upadhyaya

ಲಕ್ನೊ: ಉತ್ತರ ಪ್ರದೇಶದ ಔರೈಯಾ ಬಳಿ ಶನಿವಾರ ನಸುಕಿನ ಜಾವ 24 ಮಂದಿ ವಲಸೆ ಕಾರ್ಮಿಕರು ಟ್ರಕ್ ಅಪಘಾತದಲ್ಲಿ ದಾರುಣ ಸಾವು ಕಂಡ ಘಟನೆಗೆ ಸಂಬಂಧಪಟ್ಟಂತೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಸಿಎಂ ಯೋಗಿ ಆದಿತ್ಯನಾಥ್ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.

ಈ ಸಂಬಂಧ ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯೋಗಿ ಆದಿತ್ಯನಾಥ್ ಘಟನೆ ಬಗ್ಗೆ ವಿವರಣೆ ಪಡೆದರು. ಅಲ್ಲದೆ ಸೇವೆಯಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಫತೇಪುರ ಸಿಕ್ರಿ ಆಗ್ರಾ ಮತ್ತು ಮಥುರಾ ಸ್ಟೇಷನ್ ಹೌಸ್ ಆಫೀಸರ್ ಗಳನ್ನು ಅಮಾನತುಗೊಳಿಸಿದ್ದಾರೆ.

ಪರಿಹಾರ ಪ್ರಕಟ: ಘಟನೆ ಸಂಬಂಧ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಪೊಲೀಸ್ ಮಹಾ ನಿರ್ದೇಶಕ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಲ್ಲಿ ವಿವರಣೆ ಕೇಳಿರುವ ಸಿಎಂ ಘಟನೆಯ ವಿವರ ಪಡೆದರು. ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಉತ್ತರ ಪ್ರದೇಶಕ್ಕೆ ಬರುವ ಮತ್ತು ಈ ರಾಜ್ಯದ ಮೂಲಕ ಹಾದುಹೋಗುವ ವಲಸೆ ಕಾರ್ಮಿಕರಿಗೆ ಆಹಾರ, ಸಾರಿಗೆ ಮತ್ತು ಆಶ್ರಯ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕು ಎಂದು ಮುಖ್ಯಮಂತ್ರಿಗಳು ನಿನ್ನೆ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಆದರೆ ಇಲ್ಲಿ ಮುಖ್ಯಮಂತ್ರಿಗಳ ಆದೇಶವನ್ನು ಅಧಿಕಾರಿಗಳು ಜವಾಬ್ದಾರಿಯಿಂದ ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಹೀಗಾಗಿ ಅಧಿಕಾರಿಗಳನ್ನೇ ಇಲ್ಲಿ ಹೊಣೆಯಾಗಿಸಲಾಗಿದೆ.

SCROLL FOR NEXT