ನವದೆಹಲಿ: ಲಾಕ್ ಡೌನ್ ವಿಫಲವಾಗಿದೆ ಎಂದು ಹೇಳುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಲಾಕ್ಡೌನ್ ಕೊನೆಗೊಳ್ಳುವವರೆಗೂ ಕ್ವಾರಂಟೈನ್ ಮಾಡಬೇಕು ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.
ಈಗಾಗಲೇ ಕೊರೊನಾದಿಂದಾಗಿ ಭೀತಿಗೊಳಗಾಗಿರುವ ಜನರಲ್ಲಿ ಅವರು ಮತ್ತಷ್ಟು ದಿಗಿಲು ಹುಟ್ಟಿಸುತ್ತಿದ್ದಾರೆ. ಇದನ್ನು ತಡೆಯಲು ಗಾಂಧಿ ಕುಟುಂಬದವರನ್ನು ಕ್ವಾರಂಟೈನ್ನಲ್ಲಿ ಇಡಬೇಕು ಎಂದು ಅವರು ಹೇಳಿದ್ದಾರೆ.
ಕೊರೊನಾದಿಂದಾಗಿ ಜನರು ಮೊದಲೇ ಭೀತಿಗೊಳಗಾಗಿದ್ದಾರೆ. ಮಾರ್ಚ್ 25ರಂದು ದೇಶದಾದ್ಯಂತ ಲಾಕ್ಡೌನ್ ಘೋಷಣೆಯಾದಾಗಿನಿಂದಲೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪ್ರತಿಯೊಂದರಲ್ಲೂ ತಪ್ಪುಗಳನ್ನೇ ಹುಡುಕುತ್ತಿದ್ದಾರೆ. ಜನರಲ್ಲಿ ಮತ್ತಷ್ಟು ದಿಗಿಲು ಹುಟ್ಟಿಸುತ್ತಿದ್ದಾರೆ ಎಂದು ವರ್ಮಾ ದೂರಿದ್ದಾರೆ.
ಕಾಂಗ್ರೆಸ್ ಸಹ ಇದಕ್ಕೆ ಕಟುವಾದ ತಿರುಗೇಟು ನೀಡಿದೆ. ವೈಯಕ್ತಿಕ ಟೀಕೆ ಮಾಡುವ ಬದಲು ಯೋಜಿತವಲ್ಲದ ಲಾಕ್ಡೌನ್ನಿಂದ ವಲಸೆ ಕಾರ್ಮಿಕರಿಗೆ ಆಗಿರುವ ತೊಂದರೆಗಳ ಬಗ್ಗೆ ಬಿಜೆಪಿ ಉತ್ತರಿಸಲಿ ಎಂದು ಕಾಂಗ್ರೆಸ್ ಹೇಳಿದೆ.