ದೇಶ

ಮೀಟೂ: ಮಾನಹಾನಿ ಪ್ರಕರಣದಲ್ಲಿ ಅಕ್ಬರ್, ಪ್ರಿಯಾ ರಮಣಿ ನಡುವೆ ರಾಜಿಗೆ ಅವಕಾಶ ಇದೆಯೇ?- ನ್ಯಾಯಾಲಯ

Nagaraja AB

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂಜೆ ಅಕ್ಬರ್ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ರಾಜಿಗೆ ಅವಕಾಶ ಇದೆಯೇ ಎಂದು ದೆಹಲಿಯ ನ್ಯಾಯಾಲಯವೊಂದು ಶನಿವಾರ ಕೇಳಿದೆ.

20 ವರ್ಷಗಳ ಹಿಂದೆ ಪತ್ರಕರ್ತೆಯಾಗಿದ್ದ ಸಮಯದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದ ಪ್ರಿಯಾ ರಮಣಿ ವಿರುದ್ಧ ಎಂ. ಜೆ. ಅಕ್ಬರ್ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

2018ರಲ್ಲಿ ಮೀಟೂ ಅಭಿಯಾನದಲ್ಲಿ ಎಂಜೆ ಅಕ್ಬರ್ ವಿರುದ್ಧ ರಮಣಿ ಆರೋಪ ಮಾಡಿದ್ದರು. ಸಾರ್ವಜನಿಕ ಒಳಿತಿಗಾಗಿ ಸತ್ಯವನ್ನು ಬಹಿರಂಗಪಡಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು.

ಈ ಪ್ರಕರಣದ ಬಗ್ಗೆ ಅಂತಿಮ ವಾದವನ್ನು ಇಂದು ಆರಂಭಿಸಿದ  ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ರವೀಂದ್ರ ಕುಮಾರ್ ಪಾಂಡೆ ಈ ಪ್ರಶ್ನೆಯನ್ನು ಮುಂದಿಟ್ಟರು. ಅಕ್ಬರ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಗೀತಾ ಲೂರ್ಥಾ, ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ತನ್ನ ಕಕ್ಷಿದಾರರ ಮಾತನಾಡಬೇಕಿದ್ದು, ಸಮಯದ ಅಗತ್ಯವಿದೆ ಎಂದರು.

ಈ ಪ್ರಕರಣದ ಸಂಗತಿಗಳು ವಿಚಿತ್ರವಾದ ಕಾರಣ ರಾಜಿಗೆ ಕಡಿಮೆ ಅವಕಾಶವಿದೆ ಎಂದು ರಮಣಿಯ ಪರ ವಕೀಲ ಭಾವೂಕ್ ಚೌಹಾನ್ ಹೇಳಿದ್ದಾರೆ. ಒಪ್ಪಂದದ ಬಗ್ಗೆ ಇಬ್ಬರು ಪ್ರತಿಕ್ರಿಯಿಸುವಂತೆ ತಿಳಿಸಿದ ನ್ಯಾಯಾಲಯ, ನವೆಂಬರ್ 24ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿತು.

SCROLL FOR NEXT