ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ರೈತರ ಆಂದೋಲನಕ್ಕೆ ಕಾಂಗ್ರೆಸ್ಸೇತರ 9 ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದು, ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ತಕ್ಷಣ ರದ್ದುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ( ಮಾರ್ಕ್ಸ್ ವಾದಿ) ( ಸಿಪಿಐ-ಎಂ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ( ಸಿಪಿಐ) ಫಾರ್ವರ್ಡ್ ಬ್ಲಾಕ್ ( ಎಫ್ ಬಿ) , ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ), ರಾಷ್ಟ್ರೀಯ ಜನತಾದಳ ( ಆರ್ ಜೆಡಿ) ದೆಹಲಿ ಘಟಕಗಳು ಸಭೆ ನಡೆಸಿದ್ದು, ರೈತರ ವಿರುದ್ಧ ಸರ್ಕಾರದ ದಮನಕಾರಿ ಕ್ರಮವನ್ನು ಬಲವಾಗಿ ಖಂಡಿಸಿವೆ.
ಸಭೆಯು ಮೂರು ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ರೈತ ಚಳವಳಿಗೆ ಸಂಪೂರ್ಣ ಬೆಂಬಲ ನೀಡುವ ನಿರ್ಣಯವನ್ನು ಅಂಗೀಕರಿಸಿದೆ ಎಂದು ದೆಹಲಿ ರಾಜ್ಯ ಸಿಪಿಐ, ಸಿಪಿಐ (ಎಂ), ಎನ್ ಸಿಪಿ, ಡಿಎಂಕೆ, ಆರ್ ಜೆಡಿ, ಆರ್ ಎಸ್ ಪಿ, ಫಾರ್ವರ್ಡ್ ಬ್ಲಾಕ್ ನ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಕೇಂದ್ರ ಸರ್ಕಾರ ಈ ಬಂಡವಾಳಶಾಹಿ ಕೃಷಿ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ತಕ್ಷಣವೇ ರೈತ ಸಂಘಟನೆಗಳ ಜಂಟಿ ರೈತ ಸಮಿತಿಯೊಂದಿಗೆ ಬೇಷರತ್ತಾಗಿ ಮಾತುಕತೆ ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ.