ದೇಶ

ದೇವಾಲಯದ ಜಾಗ ಒತ್ತುವರಿಯನ್ನು ಪ್ರಶ್ನಿಸಿದ ಅರ್ಚಕನನ್ನೇ ಜೀವಂತ ಸುಟ್ಟರು!

Raghavendra Adiga

ಜೈಪುರ್: ಭೂಮಿಯ ಸಂಬಂಧ ನಡೆದ ಗಲಾಟೆ ಸಂದರ್ಭದಲ್ಲಿ ದೇವಾಲಯದ ಅರ್ಚಕನನ್ನು ಜೀವಂತವಾಗಿ ಸುಟ್ಟಿರುವ ಘಟನೆ ರಾಜಸ್ಥಾನದ ಕರೌಲಿ  ಜಿಲ್ಲೆಯಲ್ಲಿ ನಡೆದಿದೆ. ಸುಟ್ಟ ಗಾಯಗಳಿಂಡ ಬಳಲುತ್ತಿದ್ದ ಅರ್ಚಕ ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ರಾಜಸ್ಥಾನದ ಕರೌಲಿ ಜಿಲ್ಲೆಯ ಸಪೋತ್ರಾದಲ್ಲಿ ನಡೆದ ಘಟನೆಯಲ್ಲಿ ದೇವಾಲಯದ ಅರ್ಚಕ ಬಾಬುಲಾಲ್ (50) ಸಾವಿಗೀಡಾಗಿದ್ದಾರೆ. ಇವರ ಮೇಲೆ ಒಂದೇ ಕುಟುಂಬದ ಆರು ಮಂದಿ ಸೇರಿ ಬೆಂಕಿ ಹಚ್ಚಿದ್ದಾರೆಂದು ಸಾವಿಗೆ ಮುನ್ನ ನೀಡಿದ ಹೇಳಿಕೆಯಲ್ಲಿ ಬಾಬುಲಾಲ್ ವಿವರಿಸಿದ್ದಾರೆ.

"ಪ್ರಕರಣದ ಪ್ರಮುಖ ಆರೋಪಿ ಕೈಲಾಶ್ ಮೀನಾನ ಬಂಧನವಾಗಿದೆ.  ಈ ಬಗ್ಗೆ ತನಿಖೆ ನಡೆಸಲು ಆರು ತಂಡಗಳನ್ನು ರಚಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ" ಎಂದು ಕರೌಲಿಯ ಎಸ್ಪಿ ಮೃದೂಲ್ ಕಚ್ವಾ ಹೇಳಿದ್ದಾರೆ. ಇದೇ ವೇಳೆ ಕೈಲಾಶ್ ಮೀನಾ ಅವರ ಇಡೀ ಕುಟುಂಬ ಈ ಘಟನೆಗೆ ಕಾರಣವಾಗಿದೆ ಎಂದು ಅರ್ಚಕರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ,

 ದೇವಾಲಯದ ಅರ್ಚಕರಿಗೆ ಸುಮಾರು 5.2 ಎಕರೆ ಜಮೀನು ಇದ್ದು ಗ್ರಾಮದ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್‌ಗೆ ಸೇರಿದ ಜಮೀನು ಇದಾಗಿದೆ.  ಆದರೆ ಈ ಭೂಮಿಯನ್ನು ಪ್ರಧಾನ ಅರ್ಚಕರ ಕುಟುಂಬಕ್ಕೆ ನೀಡಲಾಗಿತ್ತು.

ಆದರೆ ಅರ್ಚಕ ಬಾಬುಲಾಲ್  ಅವರ ಭೂಮಿಯ ಮೇಲೆ ರಾಜಕೀಯ ಪ್ರಭಾವವೂ ಇದ್ದ ಕೈಲಾಶ್ ಮೀನಾ ಕಣ್ಣು ಹಾಕಿದ್ದ. ಇದು ಭೂ ವಿವಾದಕ್ಕೆ ಎಡೆ ಮಾಡಿತ್ತು, ಆದರೆ ಅರ್ಚಕರ ಪರ ಗ್ರಾಮದಲ್ಲಿ ನಡೆದ ಪಂಚಾಯ್ತಿ ತೀರ್ಮಾನ ನೀಡಿದ್ದರೂ  ಆರೋಪಿಗಳು ದೇವಾಲಯದ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದಕ್ಕೆ ಮುಂದಾದರು.ಇದರ ಪರಿಣಾಮವಾಗಿ ಗಲಾಟೆ ನಡೆಯಿತು ಆ ವೇಳೆ ಅರ್ಚಕರಿಗೆ ಗುಂಪು ಬೆಂಕಿ ಹಚ್ಚಿದೆ. 

ಅರ್ಚಕ ಬಾಬುಲಾಲ್ ತಾನು ಸಾಯುವ ಮುನ್ನ ಕೈಲಾಶ್ ಮೀನಾ  ಹಾಗೂ ಇತರರು ತನ್ನಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೋಲೀಸರೆದುರು ಹೇಳಿಕೆ ನೀಡಿದ್ದಾನೆ.

SCROLL FOR NEXT