ದೇಶ

ಹತ್ರಾಸ್ ಪ್ರಕರಣ: ಮೃತಳ ಪೋಷಕರು ಮತ್ತು ಗ್ರಾಮಸ್ಥರ ಹೇಳಿಕೆಗಳನ್ನು ದಾಖಲಿಸಿದ ಸಿಬಿಐ

Vishwanath S

ಹತ್ರಾಸ್: ಹತ್ರಾಸ್ ಸಂತ್ರಸ್ತೆಯ ಕುಟುಂಬದ ಮತ್ತು ಅನೇಕ ಗ್ರಾಮಸ್ಥರ ಹೇಳಿಕೆಗಳನ್ನು ಮಂಗಳವಾರ ದಾಖಲಿಸಿರುವ ಕೇಂದ್ರ ತನಿಖಾ ದಳ(ಸಿಬಿಐ), ಸಂತ್ರಸ್ತೆಯ ಮನೆ ಮತ್ತು ಶವ ಸಂಸ್ಕಾರ ಮಾಡಿದ ಜಾಗವನ್ನು ವಿಡಿಯೋ ಚಿತ್ರೀಕರಣವನ್ನೂ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳಂತೆ, ಒಂಬತ್ತು ಸದಸ್ಯರ ಸಿಬಿಐ ತಂಡ, ಸುಮಾರು 40 ಗ್ರಾಮಸ್ಥರ ಹೇಳಿಕೆಗಳನ್ನು ದಾಖಲಿಸಿದೆ. ಸಂತ್ರೆಸ್ತೆಯ ಗ್ರಾಮ ಮತ್ತು ಅಪರಾಧ ನಡೆದ ಸ್ಥಳಗಳನ್ನೂ ತಂಡ ಪರಿಶೀಲಿಸಿದೆ. ಇಂದಿನ ತನಿಖೆಯ ಸಮಯದಲ್ಲಿ, ಸಂತ್ರಸ್ತೆಯ ತಾಯಿ ಇದ್ದಕ್ಕಿದ್ದಂತೆ ಕುಸಿದು ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಕೆ ಈಗ ಆರೋಗ್ಯದಿಂದ ಇದ್ದಾರೆ. ಈ ಮಧ್ಯೆ, ಹತ್ರಾಸ್ ಟೋಲ್ ಪ್ಲಾಜಾದಲ್ಲಿ ಉತ್ತರ ಪ್ರದೇಶ ಪೋಲಿಸರು ಬಂಧಿಸಿರುವ ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಇತರ ಮೂವರನ್ನು ವಿಚಾರಣೆ ನಡೆಸಲು ಮಥುರಾ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.

ಬಂಧಿತರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ನಂಟು ಹೊಂದಿದ್ದು, ಹತ್ರಾಸ್ ಗ್ರಾಮದ ವಾತಾವರಣವನ್ನು ಕಲುಷಿತಗೊಳಿಸಲು ಆಗಮಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

19 ವರ್ಷದ ದಲಿತ ಬಾಲಕಿಯನ್ನು ಕಳೆದ ತಿಂಗಳು ಹತ್ರಾಸ್ ಗ್ರಾಮದ ನಾಲ್ಕು ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಆರೋಪವಿದೆ. ಈ ಘಟನೆ ಇಡೀ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

SCROLL FOR NEXT