ದೇಶ

ಕಾಶ್ಮೀರವನ್ನು ಭಯೋತ್ಪಾದನಾ ಕಾರ್ಖಾನೆ ಮಾಡುತ್ತಿರುವುದೇ ಮದರಸಾಗಳು: ಮಧ್ಯ ಪ್ರದೇಶ ಸಚಿವೆ

Manjula VN

ಇಂದೋರ್: ಮದರಸಾಗಳು ಭಯೋತ್ಪಾದಕರನ್ನು ಹುಟ್ಟುಹಾಕುತ್ತಿದ್ದು, ಈ ಹಿನ್ನಲೆಯಲ್ಲಿ ಮದರಸಾಗಳಿಗೆ ನೀಡಲಾಗುತ್ತಿರುವ ಸರ್ಕಾರದ ಆರ್ಥಿಕ ನೆರವನ್ನು ಸ್ಥಗಿತಗೊಳಿಸಬೇಕೆಂದು ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಹುತೇಕ ಉಗ್ರರು ಮದರಸಾದಲ್ಲಿಯೇ ಅಧ್ಯಯನ ಮಾಡಿ ಹೊರಬಂದವರಾಗಿರುತ್ತಾರೆ. ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದಕರ ಕಾರ್ಖಾನೆಯನ್ನಾಗಿ ಮಾಡಲಾಗುತ್ತಿದೆ. ರಾಷ್ಟ್ರೀಯತೆಯನ್ನು ಅನುಸರಿಸಲು ಸಾಧ್ಯವಾಗದ ಮದರಸಾಗಳು, ಸಮಾಜದ ಸಂಪೂರ್ಣ ಪ್ರಗತಿಗಾಗಿ ಮದರಸಾಗಳನ್ನು ದೇಶದಲ್ಲಿ ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಲೀನಗೊಳಿಸಬೇಕೆಂದು ಹೇಳಿದ್ದಾರೆ. 

ನೀವು ಈ ದೇಶದ ಪ್ರಜೆಯಾಗಿದ್ದರೆ,  ಉಗ್ರರು, ಭಯೋತ್ಪಾದಕರು ಮದರಸಾಗಳಲ್ಲಿ ಕಲಿತಿರುವುದನ್ನು ಗಮನಿಸಬಹುದು. ಈ ಮದರಸಾಗಳು ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆಯನ್ನು ಕಲಿಸುವುದಿಲ್ಲ. ಮದರಸಾಗಳನ್ನು ಸದ್ಯ ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಲೀನಗೊಳಿಸಿದರೆ ಮಾತ್ರ ಸಮಾಜದ ಸಂಪೂರ್ಣ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ. 

ಸರ್ಕಾರವು ಸಾರ್ವಜನಿಕ ಹಣದಿಂದ ಧಾರ್ಮಿಕ ಶಿಕ್ಷಣವನ್ನು ಕಲಿಸಲು ಅವಕಾಶ ನೀಡುವುದಿಲ್ಲ. ಹೀಗಾಗಿ ಸರ್ಕಾರಿ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ನವೆಂಬರ್‌ನಲ್ಲಿ ಸರ್ಕಾರ ಔಪಚಾರಿಕ ಅಧಿಸೂಚನೆ ಹೊರಡಿಸುವುದಾಗಿ ಅಕ್ಟೋಬರ್ 9 ರಂದು ಅಸ್ಸಾಂ ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.

SCROLL FOR NEXT