ದೇಶ

ಎನ್ ಸಿಪಿ ಸೇರಿದ ಏಕನಾಥ್ ಖಡ್ಸೆ, ಅವರು ಮೂಲ ಬಿಜೆಪಿ ಕಾರ್ಯಕರ್ತ ಅಲ್ಲ ಎಂದ ಕೇಂದ್ರ ಸಚಿವ

Lingaraj Badiger

ಮುಂಬೈ: ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಏಕನಾಥ್ ಖಡ್ಸೆ ಅವರು ಶುಕ್ರವಾರ ಶರದ್ ಪವಾರ್ ನೇತೃತ್ವದಲ್ಲಿ ಅಧಿಕೃತವಾಗಿ ಎನ್‌ಸಿಪಿಗೆ ಸೇರಿದ್ದಾರೆ.

ಖಡ್ಸೆ ಎನ್ ಸಿಪಿ ಸೇರ್ಪಡೆಗೆ ಹಲವು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ ಅವರು 'ಮೂಲ ಬಿಜೆಪಿ ಕಾರ್ಯಕರ್ತರಲ್ಲ' ಎಂದು ತಮ್ಮ ಪಕ್ಷದ ಮಾಜಿ ಸಹೋದ್ಯೋಗಿಯನ್ನು ಟೀಕಿಸಿದ್ದಾರೆ.

ದನ್ವೆ ಅವರು ಎರಡು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಪಕ್ಷ ಸಂಘಟಿಸುವಲ್ಲಿ ಖಡ್ಸೆ ಅವರ ಕೊಡುಗೆ ಅಪಾರ ಮತ್ತು ಅವರಿಗೆ ಪಕ್ಷದಲ್ಲಿ ಸುದೀರ್ಘ ಭವಿಷ್ಯ ಇದೆ ಎಂದು ಶ್ಲಾಘಿಸಿದ್ದರು. ಆದರೆ ಇಂದು ಉಲ್ಟಾ ಹೊಡೆದ ಕೇಂದ್ರ ಸಚಿವರು, ಖಡ್ಸೆ ಅವರು ಮೂಲ ಬಿಜೆಪಿಗರಲ್ಲ. ಅವರು ಹಿಂದೆ ಕಾಂಗ್ರೆಸ್ ನಲ್ಲಿದ್ದರು ಎಂದು ಹೇಳಿದ್ದಾರೆ.

ಖಡ್ಸೆ ಅವರು ಭ್ರಷ್ಟಾಚಾರದ ಆರೋಪದ ಮೇಲೆ 2016 ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ಇದರಿಂದ ಬೇಸರಗೊಂಡ ಖಡ್ಸೆ ಅವರು ಎನ್ ಸಿಪಿ ಸೇರಿದ್ದಾರೆ ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ಖಾಡ್ಸೆ ಅವರು ಬಿಜೆಪಿ ತೊರೆದು ಶರದ್ ಪವಾರ್ ನೇತೃತ್ವದ ಎನ್ ಸಿಪಿ ಸೇರಬಹುದು ಎಂಬ ಉಹಾಪೋಹಗಳು ಇದ್ದವು. ಇದೀಗ ಅದು ನಿಜವಾಗಿದೆ.

SCROLL FOR NEXT