ದೇಶ

ಆಂಧ್ರ ಪ್ರದೇಶ: ಈಜಲು ಹೋಗಿದ್ದ ಆರು ಮಂದಿ ನೀರುಪಾಲು, ನಾಲ್ವರ ಶವ ಪತ್ತೆ!

Srinivasamurthy VN

ಪಶ್ಚಿಮ ಗೋದಾವರಿ: ಈಜಲು ಹೋಗಿದ್ದ ಆರು ಮಂದಿ ಬಾಲಕರು ನೀರುಪಾಲಾಗಿದ್ದು, ಈ ಪೈಕಿ ನಾಲ್ಕು ಮಂದಿಯ ಶವ ಪತ್ತೆಯಾಗಿರುವ ಘಟನೆ ನೆರೆಯ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯ ವೇಲೈರುಪಾಡು ಮಂಡಲದ ವಸಂತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಈಜಲು ಹೋಗಿದ್ದ ಆರು ಬಾಲಕರು ಹೊಳೆಯಲ್ಲಿ ನೀರುಪಾಲಾಗಿದ್ದಾರೆ.

ಭೂದೇವಿಪೇಟ ಗ್ರಾಮಸ್ಥರ ಗುಂಪೊಂದು ವಿಹಾರಕ್ಕಾಗಿ ಹೊಳೆಗೆ ಹೋಗಿತ್ತು. ಭಾರೀ ಮಳೆಯಿಂದ ತುಂಬಿದ್ದ ಹೊಳೆಗೆ ಈಜಾಡಲು ಈ ಆರು ಹುಡುಗರು ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಆರು ಮಂದಿ ಬಾಲಕರು ಮುಳುಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಅಗ್ನಿಶಾಮಕ ದಳ  ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಾಲ್ಕು ಬಾಲಕರ ಶವ ಪತ್ತೆಯಾಗಿದೆ. ಬಾಲಕರಾದ ಶ್ರೀರಾಮುಲು ಶಿವಾಜಿ (16), ಗಂಗಾಧರ್ ವೆಂಕಟ ರಾವ್ (16), ಕುನವರಂ ರಾಧಾ ಕೃಷ್ಣ (15) ಮತ್ತು ಕರ್ನಾತಿ ರಂಜಿತ್ (15) ಮೃತದೇಹಗಳನ್ನು ಈವರೆಗೆ ಹೊಳೆಯಿಂದ ಹೊರತೆಗೆಯಲಾಗಿದೆ. ಇನ್ನಿಬ್ಬರು ಬಾಲಕರ  ಮೃತದೇಹಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

SCROLL FOR NEXT