ದೇಶ

ಈದ್ ಮಿಲಾದ್ ಪ್ರಾರ್ಥನೆಗೆ ಹೊರಟ ಫಾರೂಕ್ ಅಬ್ದುಲ್ಲಾರಿಗೆ ತಡೆ: ಮೂಲಭೂತ ಹಕ್ಕು ಉಲ್ಲಂಘನೆ ಎಂದು ಆರೋಪಿಸಿದ ಎನ್ ಸಿ

Sumana Upadhyaya

ಶ್ರೀನಗರ: ಈದ್ ಮಿಲಾದ್ ಪ್ರಯುಕ್ತ ಹಸರತ್ಬಾಲ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಹೊರಟಿದ್ದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಜಮ್ಮು-ಕಾಶ್ಮೀರದ ಆಡಳಿತಾಧಿಕಾರಿಗಳು ನಿವಾಸದಿಂದ ಹೊರಬರದಂತೆ ತಡೆದ ಘಟನೆ ನಡೆದಿದೆ.
ಈ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಆರೋಪಿಸಿದ್ದು ಆಡಳಿತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಡಾ ಫಾರೂಕ್ ಅಬ್ದುಲ್ಲಾ ಅವರ ನಿವಾಸವನ್ನು ಜಮ್ಮು-ಕಾಶ್ಮೀರ ಆಡಳಿತ ತಡೆದು ಅವರು ಹಸರತ್ಬಾಲ್  ದರ್ಗಾ ದಲ್ಲಿ ಪ್ರಾರ್ಥನೆ ಸಲ್ಲಿಸಲು ನಿವಾಸ ಬಿಟ್ಟು ಹೋಗದಂತೆ ಮಾಡಿದ್ದಾರೆ. ಮುಸ್ಲಿಮರ ಧಾರ್ಮಿಕ ಆಚರಣೆ ದಿನ ಪ್ರಾರ್ಥನೆ ಸಲ್ಲಿಸುವ ಮೂಲಭೂತ ಹಕ್ಕನ್ನು ಕಸಿದಿರುವ ಜಮ್ಮು-ಕಾಶ್ಮೀರ ಆಡಳಿತದ ಈ ಕ್ರಮವನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಟ್ವೀಟ್ ಮಾಡಿದೆ.

ಲೋಕಸಭೆಯಲ್ಲಿ ಶ್ರೀನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಫಾರೂಕ್ ಅಬ್ದುಲ್ಲಾ ಇಂದು ಈದ್ ಮಿಲಾದ್ ಪ್ರಯುಕ್ತ ದಾಲ್ ಸರೋವರ ತೀರದಲ್ಲಿರುವ ದರ್ಗಾಕ್ಕೆ ಭೇಟಿ ನೀಡಬೇಕಾಗಿತ್ತು. ಆದರೆ ಫಾರೂಕ್ ಅಬ್ದುಲ್ಲಾಗೆ ಅದು ಸಾಧ್ಯವಾಗಲಿಲ್ಲ.
ಈದ್ ಮಿಲಾದ್ ಪ್ರವಾದಿ ಮೊಹಮ್ಮದರ ಜನ್ಮ ದಿನಾಚರಣೆಯನ್ನು ಆಚರಿಸುವ ಹಬ್ಬವಾಗಿದ್ದು ಇಸ್ಲಾಂ ಕ್ಯಾಲೆಂಡರ್ ನ ಮೂರನೇ ತಿಂಗಳು ಆಚರಿಸಲಾಗುತ್ತದೆ.

ನಿನ್ನೆ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಹಲವು ಪಿಡಿಪಿ ನಾಯಕರನ್ನು ಪೊಲೀಸರು ಬಂಧಿಸಿದ್ದರು.

SCROLL FOR NEXT