ಹುಬ್ಬಳ್ಳಿ: ಬಾಲಾಕೋಟ್ ವೈಮಾನಿಕ ದಾಳಿ ಬಗ್ಗೆ ಸಾಕ್ಷಿ ಕೇಳುತ್ತಿದ್ದ ಕಾಂಗ್ರೆಸ್ಸಿಗರಿಗೆ ಪಾಕಿಸ್ತಾನ ಸರ್ಕಾರವೇ ಸಾಕ್ಷ್ಯ ಒದಗಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ತಿರುಗೇಟು ನೀಡಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಾಕೋಟ್ ದಾಳಿ ಬಗ್ಗೆ ಸಾಕ್ಷ್ಯ ಕೇಳುತ್ತಿದ್ದ ಕಾಂಗ್ರೆಸ್ಸಿಗರಿಗೆ ಪಾಕಿಸ್ತಾನದ ನಾಯಕರೊಬ್ಬರು ಪುಲ್ವಾಮ ಬಗ್ಗೆ ನೀಡಿರುವ ಹೇಳಿಕೆ ಮತ್ತು ಕ್ಯಾಪ್ಟನ್ ಅಭಿನಂದನ್ ಅವರ ಬಿಡುಗಡೆಯ ಸಾಕ್ಷ್ಯವೇ ಸಾಕು ಎಂದು ಹೇಳಿದರು.
ಪುಲ್ವಾಮ ದಾಳಿಯ ಹಿಂದೆ ಪಾಕಿಸ್ತಾನ ಇತ್ತು ಎಂಬ ಪಾಕಿಸ್ತಾನದ ಸಚಿವ ಫವಾದ್ ಚೌದರಿ ಹೇಳಿಕೆ ಕಾಂಗ್ರೆಸ್ ಗೆ ನೀಡಿರುವ ಸಾಕ್ಷ್ಯವಾಗಿದೆ ಎಂದು ಜೋಷಿ ಹೇಳಿದರು.
ಪುಲ್ವಾಮಾ ದಾಳಿ, ಬಾಲಾಕೋಟ್ ವಾಯುದಾಳಿ, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಿಡುಗಡೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಪುಲ್ವಾಮಾ ದಾಳಿಯನ್ನು ನಾವೇ ಮಾಡಿಸಿದ್ದು ಎಂದು ಪಾಕ್ ಸಚಿವ ಫವಾದ್ ಚೌಧರಿ ಹೇಳಿಕೆ ನೀಡಿದ್ದರು.
ಪಾಕಿಸ್ತಾನ ನ್ಯಾಶನಲ್ ಅಸೆಂಬ್ಲಿಯಲ್ಲಿ ತೀವ್ರ ಕೋಲಾಹಲವೆಬ್ಬಿಸಿತ್ತು. ಇದಾದ ಬಳಿಕ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಚೌಧರಿ, ನಮ್ಮ ಯುದ್ಧ ವಿಮಾನ ಭಾರತದ ಯುದ್ಧ ವಿಮಾನದ ಗುರಿಯನ್ನು ಕೆಡವಿ ಹಾಕಲು ಯತ್ನಿಸಿತಷ್ಟೆ, ನಾವು ಮುಗ್ಧ ನಾಗರಿಕರನ್ನು ಕೊಲ್ಲುವ ಮನಸ್ಥಿತಿ ಹೊಂದಿಲ್ಲ, ಭಯೋತ್ಪಾದನೆಗೆ ನಮ್ಮ ಬೆಂಬಲವಿಲ್ಲ ಎಂದಿದ್ದಾರೆ.