ದೇಶ

ಅ.ಪ್ರದೇಶ:ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದ ಐವರನ್ನು ಚೀನಾ ಸೈನಿಕರು ಅಪಹರಿಸಿದ್ದಾರೆ ಎಂದ ಕಾಂಗ್ರೆಸ್ ಶಾಸಕ

Sumana Upadhyaya

ಗುವಾಹಟಿ:ಚೀನಾ ಸೇನಾಪಡೆಯ ವರ್ತನೆ ಮಿತಿಮೀರುವಂತೆ ಕಾಣುತ್ತಿದೆ. ಅರುಣಾಚಲ ಪ್ರದೇಶದಿಂದ ಐವರನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯ ಸೈನಿಕರು ಅಪಹರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ನಿನೊಂಗ್ ಎರಿಂಗ್ ಹೇಳಿದ್ದಾರೆ.

ನಮ್ಮ ಅರುಣಾಚಲ ಪ್ರದೇಶ ರಾಜ್ಯದ ಸುಬನ್ಸಿರಿ ಜಿಲ್ಲೆಯ ಐವರನ್ನು ಚೀನಾ ಸೈನಿಕರು ಅಪಹರಿಸಿದ್ದಾರೆ. ಕೆಲ ತಿಂಗಳ ಹಿಂದೆ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾ ವರದಿ ಪ್ರಕಾರ, ಸುಬನ್ಸಿರಿ ಜಿಲ್ಲೆಯ ನಚೊ ಎಂಬ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಟಾಗಿನ್ ಸಮುದಾಯಕ್ಕೆ ಸೇರಿದ ಟೋಚ್ ಸಿಂಗ್ಕಾಮ್, ಪ್ರಸತ್ ರಿಂಗ್ಲಿಂಗ್, ಡೊಂಗ್ಟು ಎಬಿಯಾ, ತನು ಬೇಕರ್ ಮತ್ತು ನ್ಗರು ದಿರಿ ಕಾಡು ಪ್ರದೇಶದಲ್ಲಿ ಬೇಟೆಯಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಚೀನಾ ಸೇನಾ ಪಡೆ ಯೋಧರು ಅವರನ್ನು ಅಪಹರಿಸಿದ್ದು ಇನ್ನಿಬ್ಬರು ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಪ್ಪಿಸಿಕೊಂಡು ಬಂದವರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಶಾಸಕ ಟ್ವೀಟ್ ಮಾಡಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಗಡಿಯ ಗಡಿ ವಾಸ್ತವ ರೇಖೆ ಜಿಲ್ಲಾ ಕೇಂದ್ರ ದಪೊರಿಜೊದಿಂದ ಸುಮಾರು 260 ಕಿಲೋ ಮೀಟರ್ ದೂರದಲ್ಲಿದ್ದು ಅದಕ್ಕೆ ಹತ್ತಿರದ ಪೊಲೀಸ್ ಠಾಣೆ ನಚೊ ಸುಮಾರು 130 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಗ್ರಾಮಸ್ಥರು ಟ್ರಕ್ ಮೂಲಕ ಹೋಗಬೇಕು. ಮೊಬೈಲ್ ಸಂಪರ್ಕ ಸಮಸ್ಯೆ ಕೂಡ ಇದೆ.

ಕಾಣೆಯಾದವರ ಕುಟುಂಬದವರು ಸೇನಾಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಕಾಣೆಯಾದವರ ಬಗ್ಗೆ ಅವರ ಕುಟುಂಬದವರಿಂದಾಗಲಿ, ಗ್ರಾಮಸ್ಥರಿಂದಾಗಲಿ ಇದುವರೆಗೆ ದೂರು ಬಂದಿಲ್ಲ ಎಂದು ಪೊಲೀಸರು ಹೇಳುತ್ತಾರೆ.

SCROLL FOR NEXT