ದೇಶ

ಗಡಿ ಕಾಯುತ್ತಿರುವ ಯೋಧರ ಬೆಂಬಲಕ್ಕೆ ದೇಶ ಇದೆ ಎಂದು ಎಲ್ಲಾ ಸಂಸದರು ಒಕ್ಕೊರಲಿನಿಂದ ಸಂದೇಶ ರವಾನಿಸುತ್ತಿದ್ದೇವೆ:ಪ್ರಧಾನಿ ಮೋದಿ 

Sumana Upadhyaya

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಕೊರೋನಾ ವೈರಸ್ ಭೀತಿ ಮಧ್ಯೆ ಸೋಮವಾರ ಆರಂಭವಾಗುತ್ತಿದೆ. ಇಂದು ಬೆಳಗ್ಗೆ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಈ ಸಂಕಷ್ಟ ಪರಿಸ್ಥಿತಿ ಮಧ್ಯೆ ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭವಾಗುತ್ತಿದೆ. ಕೊರೋನಾ ಮಧ್ಯೆಯೇ ನಾವು ನಮ್ಮ ಕರ್ತವ್ಯ ನಿರ್ವಹಿಸಬೇಕಿದೆ. ಸಂಸದರು ಕೊರೋನಾ ಮಧ್ಯೆ ಕರ್ತವ್ಯ ನಿರ್ವಹಣೆಯ ದಾರಿ ಹಿಡಿದಿದ್ದಾರೆ. ಅವರಿಗೆಲ್ಲರಿಗೂ ನಾನು ಅಭಿನಂದನೆ ಮತ್ತು ಕೃತಜ್ಞತೆ ಹೇಳುತ್ತೇನೆ. ಈ ಬಾರಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಒಂದೇ ದಿನ ಬೇರೆ ಬೇರೆ ಸಮಯಗಳಲ್ಲಿ ನಡೆಯುತ್ತಿದೆ. ಶನಿವಾರ ಮತ್ತು ಭಾನುವಾರಗಳಂದು ಸಹ ನಡೆಯುತ್ತಿದ್ದು ಎಲ್ಲಾ ಸಂಸದರು ಅದಕ್ಕೆ ಬದ್ಧರಾಗಿದ್ದಾರೆ ಎಂದರು.

ಹಲವು ವಿಷಯಗಳ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಬಾರಿ ಚರ್ಚಿಸಲಾಗುತ್ತಿದೆ, ಉತ್ತಮವಾದ ವಿಷಯಗಳ ಬಗ್ಗೆ ಹೆಚ್ಚೆಚ್ಚು ಚರ್ಚೆ ನಡೆದರೆ ಹೊರಬರುವ ಫಲಿತಾಂಶ ಉತ್ತಮವಾಗಿರುತ್ತದೆ. ಕಲಾಪವನ್ನು ಸಂಸದರು ಸದ್ವಿನಿಯೋಗ ಮಾಡಿಕೊಳ್ಳಲಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದರು.

ಎಲ್ಲಿಯವರೆಗೆ ಕೊರೋನಾಗೆ ಲಸಿಕೆ ಬರುವುದಿಲ್ಲವೋ ಅಲ್ಲಿಯವರೆಗೆ ನಿರ್ಲಕ್ಷ್ಯ ಸಲ್ಲದು. ಆದಷ್ಟು ಬೇಗನೆ ಜಗತ್ತಿನ ಯಾವ ಮೂಲೆಗಳಿಂದಲಾದರೂ ಲಸಿಕೆ ಕಂಡುಹಿಡಿದು ಅದು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆಯಾಗಲಿ ಎಂದು ನಾವು ಬಯಸುತ್ತಿದ್ದೇವೆ. ಈ ಮೂಲಕ ನಮ್ಮ ವಿಜ್ಞಾನಿಗಳು, ನಾವು ಜನರನ್ನು ಸಂಕಷ್ಟದಿಂದ ಆಚೆ ತರುವಲ್ಲಿ ಯಶಸ್ವಿಯಾಗಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಎಂದರು.

ದೇಶ ಸೈನಿಕರ ಬೆಂಬಲಕ್ಕಿದೆ: ಭಾರತ-ಚೀನಾ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ, ಸೇನೆ ನಿಯೋಜನೆ ಮಧ್ಯೆ ಮಾತನಾಡಿದ ಪ್ರಧಾನಿ, ಈ ಪರಿಸ್ಥಿತಿಯಲ್ಲಿ ನಾವು ನಿಸ್ಸಂದೇಹವಾಗಿ, ನಿಸ್ಸಂದಿಗ್ಧವಾಗಿ ನಮ್ಮ ಗಡಿಯನ್ನು ಕಾಯುತ್ತಿರುವ ಸೈನಿಕರ ಪರವಾಗಿ ಬೆಂಬಲಕ್ಕೆಇದ್ದೇವೆ.ಈ ಸಂದರ್ಭದಲ್ಲಿ ಎಲ್ಲಾ ಸಂಸದರು ಒಕ್ಕೊರಲಿನಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶವನ್ನು ಸೈನಿಕರಿಗೆ ರವಾನಿಸುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು. 

SCROLL FOR NEXT