ದೇಶ

ರಾಜ್ಯಸಭೆಯಲ್ಲಿ ಭಾನುವಾರ ಕೃಷಿ ಮಸೂದೆ ಬಗ್ಗೆ ಚರ್ಚೆ ಸಾಧ್ಯತೆ: ಬೆಂಬಲ ಒಗ್ಗೂಡಿಸಲು ಬಿಜೆಪಿ, ಪ್ರತಿಪಕ್ಷಗಳ ಪ್ರಯತ್ನ

Nagaraja AB

ನವದೆಹಲಿ: ರಾಜ್ಯಸಭೆಯಲ್ಲಿ ಭಾನುವಾರ ವಿವಾದಾತ್ಮಕ ಕೃಷಿ ಮಸೂದೆಯನ್ನು ಚರ್ಚೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದ್ದು, ರೈತ ವಿರೋಧಿ ಮತ್ತು ಕಾರ್ಪೋರೇಟ್ ಪರ ಮಸೂದೆ ಎಂದು ಹೇಳಲಾಗುವ ಪ್ರಸ್ತಾವಿತ ಮಸೂದೆಯನ್ನು ಒಗ್ಗಟ್ಟಿನಿಂದ ವಿರೋಧಿಸಲು  ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ. 

ಆಡಳಿತರೂಢ ಬಿಜೆಪಿ ಕೂಡಾ ಮಸೂದೆ ಪರ ಬೆಂಬಲ ಪಡೆಯಲು ಅನೇಕ ಪ್ರಾದೇಶಿಕ ಪಕ್ಷಗಳನ್ನು ಮನವೊಲಿಕೆಯ ಕಾರ್ಯದಲ್ಲಿ ನಿರತವಾಗಿದೆ. ಪ್ರಮುಖ ಎನ್ ಡಿಎ ಅಂಗಪಕ್ಷ ಶಿರೋಮಣಿ ಅಕಾಲಿದಳದ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಕೃಷಿ ಮಸೂದೆ ಈಗಾಗಲೇ ಅಂಗೀಕಾರಗೊಂಡಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರವಾಗಬೇಕಾಗಿದೆ. ಈ ಮಸೂದೆಗೆ ಬೆಂಬಲ ಪಡೆಯಲು ಕಾಂಗ್ರೆಸ್ ಯೇತರ ಪ್ರತಿಪಕ್ಷಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಕೆಲ ಬಿಜೆಪಿ ಮುಖಂಡರು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ  245 ಸದಸ್ಯ ಬಲ ಹೊಂದಿರುವ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟವು ತನ್ನದೇ ಆದ ಸ್ಪಷ್ಟ ಬಹುಮತವನ್ನು ಹೊಂದಿಲ್ಲ. ಸರ್ಕಾರ ಪ್ರಸ್ತಾಪಿಸಿದ ವಿವಿಧ ಶಾಸನಗಳು ಅಂಗೀಕಾರಗೊಳ್ಳಲು ಅನೇಕ ಪ್ರಾದೇಶಿಕ ಪಕ್ಷಗಳು ಕಳೆದ ಹಲವಾರು ಅಧಿವೇಶನಗಳಿಗೆ ಬೆಂಬಲ ನೀಡಿವೆ.ಎಐಎಡಿಎಂಕೆ 9 ಸದಸ್ಯರು, ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಆರು ಸದಸ್ಯರು ಸೇರಿದಂತೆ 130 ಸದಸ್ಯರು ಮಸೂದೆಯನ್ನು ಬೆಂಬಲಿಸಲಿದ್ದಾರೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಟಿಆರ್ ಎಸ್ ಸದಸ್ಯರು ಮಸೂದೆ ವಿರುದ್ಧವಾಗಿ ಮತ ನೀಡುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಮ್ಮ ಪಕ್ಷದ ಸಂಸದರಿಗೆ ಹೇಳಿದ್ದಾರೆ. ಬಿಜೆಪಿ 86 ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷದ 40 ಸದಸ್ಯರಿದ್ದಾರೆ. ಎಸ್ ಎಡಿಯ ಮೂವರು ಮಸೂದೆ ವಿರುದ್ಧವಾಗಿ ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಆದರೆ, ಶಿವಸೇನಾ ಮಸೂದೆಯನ್ನು ಬೆಂಬಲಿಸುವುದಾಗಿ ತಿಳಿಸಿದೆ. 

ಎಎಪಿಯ ಮೂವರು, ಸಮಾಜವಾದಿ ಪಕ್ಷದ 8, ಬಿಎಸ್ಪಿಯ ನಾಲ್ವರು ಸದಸ್ಯರು ಮಸೂದೆ ವಿರುದ್ಧವಾಗಿ ಪ್ರತಿಪಕ್ಷಗಳ ಸಾಲಿನಲ್ಲಿ ನಿಂತು ಪ್ರತಿಭಟಿಸಿದ್ದಾರೆ ಆದರೆ, ಅಂಗೀಕಾರಕ್ಕೆ ಅಡ್ಡಿಯುಂಟುಮಾಡುವಷ್ಟು ಸಾಮರ್ಥ್ಯವನ್ನು ಸಾಬೀತುಪಡಿಸಿಲ್ಲ,  ಬಿಜೆಪಿಯೇತರ ಪಕ್ಷಗಳು ರಾಜ್ಯಸಭೆಯಲ್ಲಿ ಒಗ್ಗಟ್ಟಿನಿಂದ ಮಸೂದೆ ವಿರೋಧಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

SCROLL FOR NEXT