ದೇಶ

ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ನೂತನ ಕೃಷಿ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

Manjula VN

ನವದೆಹಲಿ: ಭಾರೀ ವಿರೋಧಗಳ ನಡುವೆಯೂ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಎರಡು ಕೃಷಿ ಮಸೂದೆಗಳನ್ನು ಭಾನುವಾರ ಮಂಡಿಸಿದೆ. 

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರಾಜ್ಯಸಭೆಯಲ್ಲಿಂದು ಕೃಷಿ ಮಸೂದೆಯನ್ನು ಮಂಡನೆ ಮಾಡಿದ್ದಾರೆ. 

ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತರು ((ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020. ಮಸೂದೆಯನ್ನು ಕೇಂದ್ರ ಸಚಿವರು ಮಂಡನೆ ಮಾಡಿದ್ದಾರೆ. 

ಮಸೂದೆ ಮಂಡನೆ ವೇಳೆ ಮಾತನಾಡಿರುವ ತೋಮರ್ ಅವರು, ಎರಡು ಮಸೂದೆಗಳು ಐತಿಹಾಸಿಕವಾಗಿದ್ದು ರೈತರ ಜೀವನದಲ್ಲಿ ಬದಲಾವಣೆ ತರಲಿದೆ. ರೈತರು ದೇಶದಲ್ಲಿ ಎಲ್ಲಿ ಬೇಕಾದರೂ ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ವ್ಯಾಪಾರ ಮಾಡಲು ಈ ಮಸೂದೆ ಅನುವು ಮಾಡಿಕೊಡಲಿದೆ. ಈ ಮಸೂದೆಗಳು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿಲ್ಲ ಎಂಬುದನ್ನು ಇದೇವೇಳೆ ಸ್ಪಷ್ಟಪಡಿಸಲು ಇಚ್ಛಿಸುತ್ತನೆಂದು ಹೇಳಿದ್ದಾರೆ. 

ರೈತರ ಬೆಳೆಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, ಎಲೆಕ್ಟ್ರಾನಿಕ್ ವ್ಯಾಪಾರಗಳ ವಹಿವಾಟಿಗೆ ಅನುಮತಿ ನೀಡಲಿದೆ ಮತ್ತು ಕೃಷಿ ಉತ್ಪನ್ನಗಳ ಮೇಲೆ ನೇರ ಆನ್‌ಲೈನ್ ಖರೀದಿ ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ ವಹಿವಾಟು ವೇದಿಕೆಗಳನ್ನು ಸ್ಥಾಪನೆಗೊಳಿಸಲು ಅನುವು ಮಾಡಿಕೊಡುತ್ತದೆ.

ಇನ್ನು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, ಯಾವುದೇ ಕೃಷಿ ಉತ್ಪನ್ನಗಳ ಉತ್ಪಾದನೆ ಅಥವಾ ಪಾಲನೆಗೂ ಮೊದಲು ಕೃಷಿ ಒಪ್ಪಂದವನ್ನು ಅನುವು ಮಾಡಿಕೊಡಲಿದೆ. ಕೃಷಿ ಉತ್ಪನ್ನಗಳ ಖರೀದಿಗೆ ಪಾವತಿಸಬೇಕಾದ ಖಾತರಿಯ ಬೆಲೆಯನ್ನು ಅಂತಹ ಒಪ್ಪಂದಗಳಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ಮಸೂದೆ ಕುರಿತು ಸಚಿವರು ವಿವರಿಸಿದ್ದಾರೆ. 

SCROLL FOR NEXT