ದೇಶ

ಸಂಸದರ ವರ್ತನೆಯಿಂದ ತೀವ್ರ ಅಸಮಾಧಾನ, ನಿದ್ರೆ ಮಾಡಿಲ್ಲ; ಒಂದು ದಿನದ ಉಪವಾಸ ಸತ್ಯಾಗ್ರಹ ಕುಳಿತ ಉಪಸಭಾಪತಿ

Srinivasamurthy VN

ನವದೆಹಲಿ: ಕೃಷಿ ಮಸೂದೆ ಮಂಡನೆ ವೇಳೆ ಗದ್ದಲ ಮಾಡಿದ್ದ ರಾಜ್ಯಸಭೆ ಸದಸ್ಯರ ವರ್ತನೆ ಕುರಿತಂತೆ ಉಪಸಭಾಪತಿ ಹರಿವಂಶ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸದರ ವರ್ತನೆ ವಿರುದ್ಧ ಸಂಸತ್ ಆವರಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.

ನಿನ್ನೆ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ವೇಳೆ ಗದ್ದಲವಾಗಿ ಎಂಟು ಸಂಸದರ ಅಮಾನತುಗೊಂಡ ಬಳಿಕವೂ ದೆಹಲಿ ರಾಜಕೀಯ ಹೈಡ್ರಾಮ ಮುಂದುವರಿದಿದ್ದು, ಒಂದೆಡೆ ವಿಪಕ್ಷ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆಗೆ ಅಮಾನತುಗೊಂಡ ಎಂಟು ಸಂಸದರು ಕೂಡ ಸಾಥ್ ನೀಡಿದ್ದಾರೆ. ಇನ್ನು ನಿನ್ನೆ ಇದೇ ಸಂಸದರ ಆಕ್ರೋಶಕ್ಕೆ ಗುರಿಯಾಗಿದ್ದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಕೂಡ ಉಪವಾಸ ನಿರಶನಕ್ಕೆ ಕೂತಿದ್ದಾರೆ. ಉಪವಾಸ ಕೂರುವ ಮುನ್ನ ಹರಿವಂಶ್ ಅವರು ಇಂದು ಮಂಗಳವಾರ ಬೆಳಗ್ಗೆ ಧರಣಿ ನಿರತ ಎಂಟು ಸಂಸದರನ್ನು ಭೇಟಿಯಾಗಿ ಚಹಾ ಕೊಟ್ಟು ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೆ, ಸಂಸದರ ಆಕ್ರೋಶ ತಣಿದಿರಲಿಲ್ಲ. ಹೀಗಾಗಿ ಅವರು ಧರಣಿ ಕೈ ಬಿಡಲು ಅಸಮ್ಮತಿ ಸೂಚಿಸಿದರು.

ಇದರಿಂದ ಬೇಸತ್ತ ಹರಿವಂಶ್ ಅವರು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ತಾನು ಇಡೀ ದಿನ ಉಪವಾಸ ನಿರಶನಕ್ಕೆ ಕೂತಿರುವುದಾಗಿ ತಿಳಿಸಿದ್ದಾರೆ. ಸದನದಲ್ಲಿ ಆದ ಘಟನೆ ಬಗ್ಗೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿರುವ ಹರಿವಂಶ್ ಅವರು, ವಿಪಕ್ಷಗಳ ಸದಸ್ಯರ ವರ್ತನೆಯಿಂದ ಬಹಳ ನೋವಾಗಿದ್ದು, ತನಗೆ ಇಡೀ ರಾತ್ರಿ ನಿದ್ರೆ ಬರಲಿಲ್ಲ. ನಾಳೆ ಬೆಳಗ್ಗೆಯವರೆಗೂ ಉಪವಾಸ ಕೂರುವುದಾಗಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಎರಡು ಕೃಷಿ ಮಸೂದೆಗಳನ್ನ ಭಾನುವಾರ ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ದುರ್ವರ್ತನೆ ತೋರಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಘಟನೆಯನ್ನು ಸದನದಲ್ಲಿ ಪ್ರಸ್ತಾಪಿಸಿ ಸದಸ್ಯರ ದುರ್ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ನಾಸಿರ್ ಹುಸೇನ್ ಸೇರಿದಂತೆ ಎಂಟು ಸಂಸದರನ್ನು ಒಂದು ವಾರದ ಕಾಲ ಅಮಾನತು ಮಾಡಿರುವುದಾಗಿ ತಿಳಿಸಿದರು.

SCROLL FOR NEXT