ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಎದುರಿಸಲು ಎಲ್ಲಾ ಸಮಾನ ಮನಸ್ಕ ಪಕ್ಷಗಳೂ ಒಗ್ಗೂಡಬೇಕು ಎಂದು ಚುನಾವಣೆ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಕರೆ ನೀಡಿದ್ದು ಗೊತ್ತೇ ಇದೆ. ಆದರೆ ಈಗ ನಾಲ್ಕನೇ ಹಂತದ ಮತದಾನ ಪ್ರಗತಿಯಲ್ಲಿರುವಾಗಲೇ ಟಿಎಂಸಿಗೆ ಕಾಂಗ್ರೆಸ್ ಕೈ ಕೊಟ್ಟಿದೆ!!.
ಬಂಗಾಳದಲ್ಲಿ ಟಿಎಂಸಿಗೆ ಬೆಂಬಲ ನೀಡುವುದರ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಒಂದು ವೇಳೆ ಬಂಗಾಳದ ಚುನಾವಣೆ ಫಲಿತಾಂಶ ಅತಂತ್ರವಾದಲ್ಲಿ, ಟಿಎಂಸಿಗೆ ಬೆಂಬಲ ಕೊಡುವುದಿಲ್ಲ ಎಂದು ಸ್ಪಷ್ಟಪಾಡಿಸಿದ್ದಾರೆ.
"ಫಲಿತಾಂಶ ಅತಂತ್ರವಾದಲ್ಲಿ ಸರ್ಕಾರ ರಚಿಸಲು ಬಿಜೆಪಿ ಹಾಗೂ ಟಿಎಂಸಿ ಕೈಜೋಡಿಸಬಹುದು ಮಮತಾ ಬ್ಯಾನರ್ಜಿ ಅವರ ಕಾರಣದಿಂದಲೇ ಬಂಗಾಳದಲ್ಲಿ ಬಿಜೆಪಿ ಹಾಗೂ ಕೋಮುವಾದಿ ರಾಜಕಾರಣ ನೆಲೆಕಂಡುಕೊಂಡಿದೆ. ಚುನಾವಣೋತ್ತರ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಎಂಸಿಗೆ ಬೆಂಬಲ ನೀಡುವುದಿಲ್ಲ" ಎಂದು ಚೌಧರಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್-ಎಡಪಕ್ಷ-ಐಎಸ್ಎಫ್ ಸಂಜುಕ್ತ ಮೋರ್ಚ ಅಥವಾ ಯುನೈಟೆಡ್ ಫ್ರಂಟ್ ಸರ್ಕಾರ ರಚಿಸುವುದಕ್ಕೆ ಆಕೆಯ ಬೆಂಬಲ ಕೇಳುವ ಸಾಧ್ಯತೆಗಳೂ ಕ್ಷೀಣ ಎಂದು ಚೌಧರಿ ತಿಳಿಸಿದ್ದಾರೆ.