ದೇಶ

ಹರಿಯಾಣ: ಪ್ರತಿಭಟನಾನಿರತ ರೈತರಿಗೆ ಕೋವಿಡ್-19 ಪರೀಕ್ಷೆ, ಲಸಿಕೆ ನೀಡಿಕೆ- ಅನಿಲ್ ವಿಜ್ 

Nagaraja AB

ಚಂಡೀಗಢ:ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ದೆಹಲಿ- ಹರಿಯಾಣ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್, ಪ್ರತಿಭಟನಾನಿರತ ರೈತರಿಗೂ ಕೋವಿಡ್-19 ಪರೀಕ್ಷೆ ಮಾಡಿ, ಲಸಿಕೆ ನೀಡಲಾಗುವುದು ಎಂದು ಮಂಗಳವಾರ ಹೇಳಿದ್ದಾರೆ.

ಹರಿಯಾಣದಲ್ಲಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ನನ್ನ ಕರ್ತವ್ಯ.  ಇಲ್ಲಿ ಅಪಾರ ಸಂಖ್ಯೆಯ ರೈತರು ಪ್ರತಿಭಟನೆ ಮಾಡುತ್ತಿದ್ದು, ಅವರಿಗೂ ಕೋವಿಡ್-19 ಪರೀಕ್ಷೆ ಮಾಡಿ, ಲಸಿಕೆ ನೀಡಲಾಗುವುದು.  ನಿನ್ನೆ ನಡೆದ ರಾಜ್ಯ ಮಟ್ಟದ ಕೊರೋನಾ ನಿರ್ವಹಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಜ್ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಗಡಿಯಲ್ಲಿ ಪ್ರತಿಭಟನಾನಿರತ ರೈತರಿಗೆ ಕೋವಿಡ್-19 ಪರೀಕ್ಷೆ ಮತ್ತು ಲಸಿಕೆ ನೀಡಿಕೆ ಬಗ್ಗೆ ಸೊನಿಪಾಟ್, ಜಾಜ್ಜರ್ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿರುವುದಾಗಿ ಸಚಿವರು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಅನಿಲ್ ವಿಜ್, ಪ್ರಧಾನ ಮಂತ್ರಿ ನೀಡಿರುವ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸರ್ಕಾರ ಕಾರ್ಯನಿರ್ವಹಿಸಲಿದೆ. ಆದರೆ, ಹರಿಯಾಣ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಕೋವಿಡ್-19 ನಿಂದ ಹೇಗೆ ಕಾಪಾಡುವುದು ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಹರಿಯಾಣದಲ್ಲಿ ಕಳೆದ 24 ಗಂಟೆಗಳಲ್ಲಿ 3,146 ಹೊಸ ಕೋವಿಡ್-19 ಪ್ರಕರಣಗಳು ಹಾಗೂ 33 ಸಾವು ಪ್ರಕರಣಗಳು ಸಂಭವಿಸಿರುವುದಾಗಿ  ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

SCROLL FOR NEXT