ದೇಶ

ರೈಲು ನಿಲ್ದಾಣ, ಅಮಿತಾಬ್‌ ಬಚ್ಚನ್‌ ಮನೆಗೆ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಕರೆ: ಇಬ್ಬರ ಬಂಧನ

Manjula VN

ಮುಂಬೈ: ವಾಣಿಜ್ಯ ನಗರಿ ಮುಂಬೈನ ಮೂರು ಪ್ರಮುಖ ರೈಲು ನಿಲ್ದಾಣಗಳು ಹಾಗೂ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ಶನಿವಾರ ತಿಳಿದುಬಂದಿದೆ. 

ಕಳೆದ ರಾತ್ರಿ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಕರೆ ಮಾಡಿರುವ ಅನಾಮಿಕ ವ್ಯಕ್ತಿ, ಜುಹುನಲ್ಲಿರುವ ಅಮಿತಾಭ್ ಬಚ್ಚನ್ ನಿವಾಸ ಹಾಗೂ ಮುಂಬೈನ ಮೂರು ರೈಲ್ವೇ ನಿಲ್ದಾಣಗಳಲ್ಲಿ ಬಾಂಬ್​ ಇಟ್ಟಿರುವುದಾಗಿ ಮಾಹಿತಿ ತಿಳಿಸಿದ್ದಾರೆ. 

ಕೂಡಲೇ ಎಚ್ಚೆತ್ತ ಮುಂಬೈ ಪೊಲೀಸರು ಕರೆಯನ್ನಾಧರಿಸಿ ಹುಡುಕಾಟ ನಡೆಸಿದರಾದರೂ ಯಾವುದೇ ಸ್ಫೋಟಕ, ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂಬುದು ದೃಢಪಟ್ಟಿತ್ತು. 

ಕಳೆದ ರಾತ್ರಿ ಕರೆ ಮಾಡಿದ್ದ ವ್ಯಕ್ತಿಗಳು, ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್, ದಾದಲ್ ಹಾಗೂ ಬೈಕುಲ್ಲಾ ರೈಲ್ವೇ ನಿಲ್ದಾಣ, ಅಮಿತಾಭ್ ಬಚ್ಚನ್ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಇದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT