ದೇಶ

ಪ್ರಶಸ್ತಿ ಮಾತ್ರ ಏಕೆ, ಕ್ರೀಡಾಂಗಣಗಳಿಗೆ ಕ್ರೀಡಾ ದಿಗ್ಗಜರ ಹೆಸರನ್ನಿಡಿ: ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ 

Sumana Upadhyaya

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬರೋಬ್ಬರಿ 41 ವರ್ಷಗಳ ನಂತರ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುತ್ತಿದ್ದಂತೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು.

ಇದು ಕಾಂಗ್ರೆಸ್ ನ್ನು ಸಹಜವಾಗಿ ಕೆರಳಿಸಿದೆ. ಒಲಿಂಪಿಕ್ ವರ್ಷದಲ್ಲಿ ಕ್ರೀಡೆಗೆ ಬಜೆಟ್ ನ್ನು ಕಡಿತಗೊಳಿಸುವ ಮೋದಿ ಸರ್ಕಾರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರನ್ನು ಬದಲಾಯಿಸುವ ಮೂಲಕ ರಾಜೀನಾಮೆ ಮಾಡುತ್ತಿದೆ, ಹಾಗಾದರೆ ಅಹ್ಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಮತ್ತು ದೆಹಲಿಯಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣದ ಹೆಸರನ್ನು ಕೂಡ ಬದಲಿಸಿ ದೇಶದ ಕ್ರೀಡಾ ದಿಗ್ಗಜರ ಹೆಸರನ್ನು ಇಡಲಿ ಎಂದು ಹೇಳಿದೆ.

ನಿನ್ನೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ನನಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಹೆಸರಿನಲ್ಲಿ ಘೋಷಣೆ ಮಾಡಿ ಎಂದು ನಾಗರಿಕರಿಂದ ಮನವಿಗಳು ಬರುತ್ತಿವೆ.ಅವರ ಮನೋಭಾವನೆಗಳಿಗೆ ಅನುಗುಣವಾಗಿ ಇನ್ನು ಮುಂದೆ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಘೋಷಿಸಿದ್ದರು.

ಹೆಸರು ಬದಲಾವಣೆಯನ್ನು ಸ್ವಾಗತಿಸಿರುವ ಕಾಂಗ್ರೆಸ್, ಅದನ್ನು ಆಯ್ಕೆಯ ಪ್ರಶಸ್ತಿಗಳಿಗೆ ಸೀಮಿತಗೊಳಿಸುವ ಸರ್ಕಾರದ ಕ್ರಮವನ್ನು ಖಂಡಿಸಿದೆ. ಇನ್ನು ಮುಂದೆ ಕ್ರೀಡಾಂಗಣಗಳನ್ನು ಸಹ ಕ್ರೀಡಾಪಟುಗಳ ಹೆಸರಿನಲ್ಲಿಯೇ ಮರುನಾಮಕರಣ ಮಾಡಲಿ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

ಇದು ಸರ್ಕಾರದ ರಾಜಕೀಯ ನಡೆ ಎಂದು ಟೀಕಿಸಿರುವ ಅವರು, ಒಲಿಂಪಿಕ್ ವರ್ಷದಲ್ಲಿ ಸರ್ಕಾರದ ಬಜೆಟ್ ನ್ನು 230 ಕೋಟಿ ರೂಪಾಯಿ ಕಡಿತ ಮಾಡಲಾಗಿದೆ. ರೈತರ ಪ್ರತಿಭಟನೆ, ಹಣದುಬ್ಬರದಂತಹ ವಿಷಯಗಳಿಂದ ಜನರ ಗಮನವನ್ನು ಸೆಳೆಯಲು ಮೋದಿ ಸರ್ಕಾರ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದೆ.

SCROLL FOR NEXT