ದೇಶ

ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಹತ್ಯೆ ಯತ್ನ: ಮೂವರ ಬಂಧನ 

Srinivas Rao BV

ಅಗರ್ತಲ: ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. 

ಶ್ಯಾಮಪ್ರಸಾದ್ ಮುಖರ್ಜಿ ಅವರಿದ್ದ ಅಧಿಕೃತ ನಿವಾಸ  ಸಂಜೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಬಿಪ್ಲಬ್ ದೇವ್ ಅವರ ಭದ್ರತಾ ವಲಯದ ಮೂಲಕ ಕಾರು ಹಾದು ಹೋಗಿ ಆತಂಕ ಮೂಡಿಸಿತ್ತು. 

ಡಿಕ್ಕಿ ಹೊಡೆಯಲು ಯತ್ನಿಸಿದ್ದ ವಾಹನದಿಂದ ಪಕ್ಕಕ್ಕೆ ಸರಿದು ಬಿಪ್ಲಬ್ ದೇವ್ ಅಪಾಯದಿಂದ ಪಾರಾಗಿದ್ದರು. ಆದರೆ ಅವರ ಭದ್ರತಾ ಸಿಬ್ಬಂದಿಗಳ ಪೈಕಿ ಓರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಕಾರನ್ನು ತಡೆಯಲು ಸಿಎಂ ಭದ್ರತಾ ಸಿಬ್ಬಂದಿಗಳು ಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಈ ಘಟನೆ ಬಳಿಕ ಗುರುವಾರದಂದು ಕೆರ್ಚೌಮುಹನಿಯಿಂದ ಮೂವರನ್ನು ಬಂಧಿಸಲಾಗಿದ್ದು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಮ್ಯಾಜಿಸ್ಟ್ರೇಟ್ ಪಿಪಿ ಪೌಲ್ ಎದುರು ಆರೋಪಿಗಳನ್ನು ಹಾಜರುಪಡಿಸಲಾಗಿದ್ದು, 14 ದಿನಗಳ ವಶಕ್ಕೆ ನೀಡಲಾಗಿದೆ. 

ಆರೋಪಿಗಳು 20 ವರ್ಷದ ವಯಸ್ಸಿನವರಾಗಿದ್ದು, ಹತ್ಯೆ ಯತ್ನದ ಕಾರಣ ಇನ್ನಷ್ಟೇ ತಿಳಿಯಬೇಕಿದೆ, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT