ದೇಶ

ಪ್ರತಿಪಕ್ಷಗಳ ಬೇಡಿಕೆಗೆ ತಡೆ, ಸರ್ಕಾರಕ್ಕೆ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ: ವಿಪಕ್ಷಗಳು

Srinivas Rao BV

ನವದೆಹಲಿ: ಸರ್ಕಾರ ಉದ್ದೇಶಪೂರ್ವಕವಾಗಿ ಸಂಸತ್ ಕಲಾಪವನ್ನು ಹಳಿತಪ್ಪಿಸುತ್ತಿದೆ ಎಂದು 11 ವಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಜಂಟಿ ಹೇಳಿಕೆ ನೀಡಿದ್ದು, ವಿಪಕ್ಷಗಳು ಸರ್ಕಾರದ ಸರ್ವಾಧಿಕಾರಿ ಧೋರಣೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು ಖಂಡಿಸಿದ್ದು, ಬುಧವಾರ ರಾಜ್ಯಸಭೆಯಲ್ಲಿ ನಡೆದಿದ್ದು ಆಘಾತಕಾರಿ ಹಾಗೂ ಸದನದ ಘನತೆಗೆ ಧಕ್ಕೆ ತಂದಿರುವ ಘಟನೆ ಹಾಗೂ ಸದಸ್ಯರಿಗೆ ಅವಮಾನ ಮಾಡುವ ಘಟನೆ ಎಂದು ವಿಪಕ್ಷಗಳ ನಾಯಕರು ಹೇಳಿದ್ದಾರೆ. 

ಚರ್ಚೆ ನಡೆಸುವ ಪ್ರತಿಪಕ್ಷಗಳ ಬೇಡಿಕೆಗಳಿಗೆ ಸರ್ಕಾರ ತಡೆಯೊಡ್ಡಿತ್ತು. ಪೆಗಾಸಸ್ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಚರ್ಚೆಯಿಂದ ಪಲಾಯನ ಮಾಡುತ್ತಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. 

ಪ್ರತಿಪಕ್ಷಗಳ ನಾಯಕರು ಸಂಸತ್ ನಲ್ಲಿ ಸಭೆ ನಡೆಸಿ ನಂತರ ಸರ್ಕಾರದ ವಿರುದ್ಧ ವಿಜಯ್ ಚೌಕ್ ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಂಗ್ರೆಸ್, ಎನ್ ಸಿ ಪಿ, ಶಿವಸೇನೆ, ಎಸ್ ಪಿ, ಡಿಎಂಕೆ, ಸಿಪಿಐಎಂ, ಸಿಪಿಐ, ಆರ್ ಜೆಡಿ, ಐಯುಎಂಎಲ್, ಆರ್ ಎಸ್ ಪಿ ಹಾಗೂ ಕೇರಳ ಕಾಂಗ್ರೆಸ್ (ಎಂ) ನ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗಿಯಾಗಿದ್ದ  ಈ ಸಭೆಯಲ್ಲಿ ಟಿಎಂಸಿ, ಆಮ್ ಆದ್ಮಿ, ಬಿಎಸ್ ಪಿ ಭಾಗವಹಿಸಿರಲಿಲ್ಲ ಎಂಬುದು ವಿಶೇಷ. ನೆನ್ನೆ ರಾಜ್ಯಸಭೆಯಲ್ಲಿ ಏನಾಯಿತು ಅದು ಅಘಾತಕಾರಿ, ಹಿಂದೆಂದೂ ಕಂಡಿರದ ಘಟನೆಯಾಗಿದೆ. ಪ್ರತಿಪಕ್ಷಗಳ ಪ್ರಚೋದನೆಯೇ ಇಲ್ಲದೇ ಸಂಸತ್ ನ ಭದ್ರತೆಯ ಭಾಗವಲ್ಲದವರನ್ನು ಕರೆಸಿ ಸರ್ಕಾರದ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷಗಳ ನಾಯಕರು, ಮಹಿಳಾ ಸದಸ್ಯರ ಮೇಲೆಯೂ ದಾಳಿ ನಡೆಸಲು ಮುಂದಾದರು.   ಸರ್ಕಾರದ ಈ ಸರ್ವಾಧಿಕಾರಿ ನಡೆ ಹಾಗೂ ಪ್ರಜಾಪ್ರಭುತ್ವದ ವಿರೋಧಿ ನಡೆಗಳನ್ನು ಸರ್ಕಾರ ವಿರೋಧಿಸುತ್ತದೆ ಎಂದು ಪ್ರತಿಪಕ್ಷಗಳ ನಾಯಕರು ಹೇಳಿದ್ದಾರೆ. 

ಸಂಸದೀಯ ಪ್ರಜಾಪ್ರಭುತ್ವದ ವಿರುದ್ಧ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಹೋರಾಡಲು ನಾವು ಬದ್ಧರಾಗಿದ್ದೇವೆ ರಾಷ್ಟ್ರೀಯ ಪ್ರಾಮುಖ್ಯತೆ ಹಾಗೂ ಜನತೆಯ ಕಾಳಜಿಯ ವಿಷಯದ ಬಗ್ಗೆ ಹೋರಾಡುತ್ತೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಪ್ರತಿಭಟನೆಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಎನ್ ಸಿಪಿಯ ಶರದ್ ಪವಾರ್, ಡಿಎಂಕೆ ನಾಯಕ ಟಿಆರ್ ಬಾಲು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಆನಂದ್ ಶರ್ಮ, ಎಸ್ ಪಿಯ ರಾಮಗೋಪಾಲ್ ಯಾದವ್, ಎಸ್ಎಸ್ ನ ಸಂಜಯ್ ರಾವತ್, ಡಿಎಂಕೆಯ ತಿರುಚಿ ಶಿವ, ಆರ್ ಜೆಡಿಯ ಮನೋಜ್ ಝಾ ಭಾಗವಹಿಸಿದ್ದರು. 

SCROLL FOR NEXT