ದೇಶ

ನ್ಯಾಯಾಧೀಶರ ನೇಮಕಾತಿ ಸಂಬಂಧಿಸಿ ಮಾಧ್ಯಮಗಳ ಊಹಾತ್ಮಕ ವರದಿ ದುರದೃಷ್ಟಕರ: ಸಿಜೆಐ ಅಸಮಾಧಾನ

Sumana Upadhyaya

ನವದೆಹಲಿ: ಹೈಕೋರ್ಟ್ ನ್ಯಾಯಾಧೀಶರಿಗೆ ಬಡ್ತಿ ನೀಡಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಿಸುವ ಬಗ್ಗೆ ಕೊಲಿಜಿಯಂ ಸಭೆ ಸೇರಿ ಶಿಫಾರಸು ಮಾಡಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿ ಕೇವಲ ಊಹಾಪೋಹವಾಗಿದ್ದು ತೀರಾ ದುರದೃಷ್ಟಕರ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ವ್ಯಾಖ್ಯಾನಿಸಿದ್ದಾರೆ.

ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯು ಪವಿತ್ರವಾದುದಾಗಿದ್ದು ಅದಕ್ಕೆ ಅದರದ್ದೇ ಆದ ಘನತೆ ಇದೆ. ಮಾಧ್ಯಮಗಳು ಅದರ ಪಾವಿತ್ರ್ಯತೆಯನ್ನು ಅರ್ಥಮಾಡಿಕೊಂಡು ಗೌರವಿಸಬೇಕು ಎಂದು ಸಹ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಈ ವಿಚಾರ ಮಾಧ್ಯಮಗಳಲ್ಲಿ ಬಂದಿರುವುದನ್ನು ನೋಡಿ ನಾನು ತುಂಬಾ ಅಸಮಾಧಾನಗೊಂಡಿದ್ದು, ಇದರಲ್ಲಿ ಸಂಬಂಧಪಟ್ಟವರು ನ್ಯಾಯಾಲಯದ ಸಮಗ್ರತೆ ಮತ್ತು ಘನತೆಯನ್ನು ಎತ್ತಿಹಿಡಿಯಬೇಕೆಂದು ನಾನು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ನ್ಯಾಯಾಲಯದ ನೇಮಕಾತಿ ಪ್ರಕ್ರಿಯೆಯು ಔಪಚಾರಿಕವಾಗಿ ನಿರ್ಣಯವಾಗುವ ಮುನ್ನವೇ ಮಾಧ್ಯಮಗಳು ಊಹೆ ಮಾಡಿಕೊಂಡು ವರದಿ ಮಾಡುವುದು ಸರಿಯಾದ ಕ್ರಮವಲ್ಲ, ಅದು ನ್ಯಾಯಾಲಯ ಘನತೆ, ಗೌರವಕ್ಕೆ ಧಕ್ಕೆಯುಂಟುಮಾಡಿದಂತೆ ಆಗುತ್ತದೆ. ಇಂತಹ ಬೇಜವಾಬ್ದಾರಿಯುತ ವರದಿ ಮತ್ತು ಊಹಾಪೋಹಗಳಿಂದಾಗಿ ಉಜ್ವಲ ಪ್ರತಿಭೆಗಳ ವೃತ್ತಿ ಪ್ರತಿಭೆ, ಬೆಳವಣಿಗೆಗಳು ಹಾಳಾಗುತ್ತವೆ ಎಂದು ಕೂಡ ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT