ದೇಶ

ಕುಂಭಮೇಳದಲ್ಲಿ ಕೋವಿಡ್ ನಕಲಿ ತಪಾಸಣೆ ಹಗರಣ: ಅರಿವಿದ್ದರೂ ಕ್ರಮ ಕೈಗೊಳ್ಳದೇ ಸುಮ್ಮನಿದ್ದ ಅಧಿಕಾರಿಗಳು!

Srinivas Rao BV

ಹರಿದ್ವಾರ: ಕುಂಭಮೇಳದಲ್ಲಿ ಕೋವಿಡ್-19 ನಕಲಿ ತಪಾಸಣೆ ಹಗರಣ ಅಧಿಕಾರಿಗಳ ಮೂಗಿನ ಕೆಳಗೇ ನಡೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದದ್ದು ಬಹಿರಂಗಗೊಂಡಿದೆ. 

ಹರಿದ್ವಾರ ಜಿಲ್ಲೆಯ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಕ್ರಮ ಜರುಗಿಸಿದ್ದರೆ ನಕಲಿ ಸೋಂಕು ಪತ್ತೆ ಪರೀಕ್ಷೆಗಳನ್ನು ತಡೆಯಬಹುದಿತ್ತು ಎನ್ನುತ್ತದೆ ತನಿಖಾ ವರದಿ.

"ಪಾಥೋಲಜಿ ಪ್ರಯೋಗಾಲಯಗಳಲ್ಲಿ ಹಲವು ಅಕ್ರಮಗಳು ನಡೆದಿರುವುದು ತನಿಖಾ ಹಂತದಲ್ಲಿ ಬಹಿರಂಗಗೊಂಡಿದೆ. ಆಸಕ್ತಿಯ ಅಭಿವ್ಯಕ್ತಿ (ಇಒಐ, of expression of interest) ದಾಖಲೆಗಳನ್ನು ಸಲ್ಲಿಸುವುದರಲ್ಲಿನ ವಿಳಂಬ ಸ್ಪಷ್ಟವಾಗಿದೆ. ಇಒಐ ಗಳನ್ನು ಜನವರಿಯಲ್ಲಿ ಸಲ್ಲಿಸಿದ್ದರೆ ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಏಪ್ರಿಲ್ ನಲ್ಲಿ ಸಲ್ಲಿಸಲಾಗಿದೆ. ಇಷ್ಟು ವಿಳಂಬ ಏಕೆ? ಇದಿಷ್ಟೇ ಅಲ್ಲದೇ ಪ್ರಯೋಗಾಲಯಗಳು ಸಾಮಾನ್ಯವಾಗಿ ಅನುಸರಿಸಬೇಕಿರುವ ವಿಧಾನದಲ್ಲಿ ಡೇಟಾವನ್ನು ಅಪ್ ಲೋಡ್ ಮಾಡುತ್ತಿರಲಿಲ್ಲ" ಎಂದು ಗೌಪ್ಯತೆಯ ಷರತ್ತು ವಿಧಿಸಿ ಮಾತನಾಡಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತನಿಖಾ ವರದಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಕಳೆದ ವಾರ ಸಲ್ಲಿಸಲಾಗಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ಒಂದು ಲಕ್ಷ ನಕಲಿ ಟೆಸ್ಟ್ ಗಳ ಹಿಂದಿದ್ದ ಷಡ್ಯಂತ್ರದ ಬಗ್ಗೆಯೂ ವರದಿ ಉಲ್ಲೇಖಿಸಿದೆ.

ಈ ಬೆಳವಣಿಗೆ ಬಗ್ಗೆ ಅರಿವಿರುವ ಅಧಿಕಾರಿಗಳು ಹಗರಣದ ಬಗ್ಗೆ ಮಾತನಾಡಿದ್ದು, ಹಗರಣದಲ್ಲಿ ಶಾಮೀಲಾಗಿದ್ದ ಮೇಳ ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು ಮುಖ್ಯ ವರದಿ 120 ಪುಟಗಳಿದ್ದರೆ ಸಂಪೂರ್ಣ ವರದಿ 2400 ಪುಟಗಳಷ್ಟಿದೆ ಎಂದು ಹೇಳಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಹರಿದ್ವಾರ ಜಿಲ್ಲಾಡಳಿತ 2021 ರ ಜೂನ್ ನಲ್ಲಿ ತನಿಖೆಗೆ ಆದೇಶಿಸಿತ್ತು. 15 ದಿನಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂಚನೆ ನೀಡಿದ್ದರು. ಆದರೆ ಹಲವು ಕಾರಣದಿಂದ ಅಧಿಕಾರಿಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಕಾಲಾವಕಾಶವನ್ನು ಹೆಚ್ಚಿಸಲಾಗಿತ್ತು. ಜೂನ್ 18 ರಂದು ಹರಿದ್ವಾರ ಜಿಲ್ಲಾ ಪೊಲೀಸರು ಕುಂಭಮೇಳದಲ್ಲಿನ ನಕಲಿ ಸೋಂಕು ಪತ್ತೆ ಪರೀಕ್ಷೆಗೆ ಸಂಬಂಧಿಸಿದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ಯನ್ನು ರಚಿಸಿದ್ದರು.

ಜುಲೈ ನಲ್ಲಿ ಎಸ್ ಐಟಿ ಅಕ್ರಮದಲ್ಲಿ ಶಾಮೀಲಾಗಿದ್ದ 2 ಪಾಥೋಲಜಿ ಪ್ರಯೋಗಾಲಯಗಳ ವಿರುದ್ಧ ಹಾಗೂ ಒಂದು ಕಂಪನಿಯ ವಿರುದ್ಧ ಸೆಕ್ಷನ್ 467 (ಮೌಲ್ಯಯುತ ಭದ್ರತೆಯ ಫೋರ್ಜರಿ) ಅಡಿಯಲ್ಲಿ ಎಫ್ಐಆರ್ ನ್ನು ದಾಖಲಿಸಿತ್ತು. ವಿಪತ್ತು ನಿರ್ವಹಣೆ ಕಾಯ್ದೆ, ಸಾಂಕ್ರಾಮಿಕ ಕಾಯಿದೆ, 1897, ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

SCROLL FOR NEXT