ದೇಶ

ಪಶ್ಚಿಮ ಬಂಗಾಳ ಇಬ್ಭಾಗ ಕುರಿತ ಅಭಿಪ್ರಾಯಗಳಲ್ಲಿ ಬಿಜೆಪಿ ನಾಯಕರೂ ಇಬ್ಭಾಗ!

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳವನ್ನು ಇಬ್ಭಾಗ ಮಾಡಿ ಉತ್ತರ ಬಂಗಾಳವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ಹೇಳಿಕೆಗೆ ಬಿಜೆಪಿಯಲ್ಲೇ ಅಪಸ್ವರ ಕೇಳಿಬಂದಿದೆ.

ಕೇಂದ್ರ ಸಚಿವರು ಮಂಡಿಸಿದ್ದ ಉತ್ತರ ಬಂಗಾಳ ರಾಜ್ಯದ  ಬೇಡಿಕೆಯನ್ನು ಬೆಂಬಲಿಸಿ ಬಂಗಾಳದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ್ದ 24 ಗಂಟೆಗಳಲ್ಲೇ ಬಂಗಾಳದ ಮತ್ತೋರ್ವ ಸಂಸದ ಲಾಕೆಟ್ ಚಟರ್ಜಿ ಪ್ರತ್ಯೇಕ ರಾಜ್ಯದ ಪ್ರಸ್ತಾವನೆಯನ್ನು ಬೆಂಬಲಿಸಲು ತಿರಸ್ಕರಿಸಿದ್ದಾರೆ.

ಉತ್ತರ ಬಂಗಾಳದ ಜಿಲ್ಲೆಗಳನ್ನೊಳಗೊಂಡ ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ರಚನೆಗೆ ಕೇಂದ್ರ ಸಚಿವ ಜಾನ್ ಬರ್ಲಾ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯ ಪರವಾಗಿ ಮಾತನಾಡಿರುವ ಘೋಷ್, ಒಂದು ವೇಳೆ ಉತ್ತರ ಬಂಗಾಳ ಅಥವಾ ಜಂಗಲ್ ಮಹಲ್ ಏನಾದರೂ ಪ್ರತ್ಯೇಕ ರಾಜ್ಯಗಳಾಗುವುದಿದ್ದರೆ, ಅದಕ್ಕೆ ಸಿಎಂ ಮಮತಾ ಬ್ಯಾನರ್ಜಿಯೇ ಹೊಣೆ, ಜಾನ್ ಬರ್ಲಾ ಅಕ್ರಮ ಬೇಡಿಕೆಯನ್ನೇನೂ ಇಟ್ಟಿಲ್ಲ, ಅವರ ಬೇಡಿಕೆಯಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದ್ದಾರೆ.

ಝಾರ್ಗ್ರಾಮ್, ಪುರುಲಿಯಾ, ಪಶ್ಚಿಮ ಮಿಡ್ನಾಪೋರ್ ಹಾಗೂ ಬಂಕುರ ಗಳನ್ನೊಳಗೊಂಡ ಜಂಗಲ್ ಮಹಲ್ ಜಿಲ್ಲೆಗಳಿಗೆ ಪ್ರತ್ಯೇಕ ರಾಜ್ಯವನ್ನು ರಚನೆ ಮಾಡಬೇಕೆಂದು ಬಿಜೆಪಿ ಸಂಸದರಾದ ಬಿಷ್ಣುಪುರ್ ಸೌಮಿತ್ರ ಖಾನ್ ಬೇಡಿಕೆಯನ್ನು ಮುಂದಿಟ್ಟಿದ್ದರು.

ಆದರೆ ಈ ಬೇಡಿಕೆಯನ್ನು ತಿರಸ್ಕರಿಸಿರುವ ಲಾಕೆಟ್ ಚಟರ್ಜಿ, ಹೂಗ್ಲಿಯಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿ, ಬಂಗಾಳದ ಜನತೆಗೆ ರಾಜ್ಯದಲ್ಲಿ ಭೌಗೋಳಿಕವಾಗಿ ಯಾವುದೇ ಬದಲಾವಣೆಯೂ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಬಂಗಾಳದ ಸಂಸ್ಕೃತಿ ಹಾಗೂ ದೂರದೃಷ್ಟಿ ವಿಭಿನ್ನವಾಗಿದೆ. ಉತ್ತರದಿಂದ ದಕ್ಷಿಣದವರೆಗೂ, ಪಶ್ಚಿಮದಿಂದ ಪೂರ್ವದವರೆಗೂ ಬಂಗಾಳ ಈಗಿರುವ ಸ್ಥಿತಿಯಲ್ಲೇ ಇರಬೇಕು, ಇದು ಜನರು ಒಟ್ಟಿಗೆ ಬದುಕಲು ಇಚ್ಛಿಸುವ ರವೀಂದ್ರನಾಥ್ ಠಾಗೂರರ ಭೂಮಿ ಎಂದು ಲಾಕೆಟ್ ಚಟರ್ಜಿ ಹೇಳಿದ್ದಾರೆ.

ಉತರ ಬಂಗಾಳ ಹಾಗೂ ಜಂಗಲ್ ಮಹಲ್ ಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಈ ಪ್ರದೇಶಗಳಿಂದ ಸಾವಿರಾರು ಮಂದಿ ಬದುಕು ಕಟ್ಟಿಕೊಳ್ಳುವುದಕ್ಕೆ ವಲಸೆ ಹೋಗುತ್ತಿದ್ದಾರೆ. ಜಾನ್ ಬರ್ಲ ತಮ್ಮನ್ನು ಆಯ್ಕೆ ಮಾಡಿದ ಜನರ ಭಾವನೆಗಳನ್ನು ಹೇಳುತ್ತಿದ್ದಾರೆ ಅದರಲ್ಲಿ ತಪ್ಪೇನೂ ಇಲ್ಲ ಎಂದು ಘೋಷ್ ಹೇಳಿದ್ದಾರೆ.

ಬಿಜೆಪಿಯ ಈ ಹೇಳಿಕೆಗೆ ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಪ್ರತಿಕ್ರಿಯೆ ನೀಡಿದ್ದು "2021 ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಹೊಸ ರಾಜ್ಯದ ಭರವಸೆಯನ್ನೂ ಬಿಜೆಪಿ ಪ್ರಕಟಿಸಬೇಕಿತ್ತು" ಎಂದು ಹೇಳಿದ್ದಾರೆ.

SCROLL FOR NEXT