ಚೆನ್ನೈ: ಎಐಎಡಿಎಂಕೆ ಪಕ್ಷವು ಬುಧವಾರ ಬೈಲಾ ತಿದ್ದುಪಡಿ ಮಾಡುವ ಮೂಲಕ ಒ. ಪನ್ನೀರ ಸೆಲ್ವಂ ಮತ್ತು ಕೆ.ಪಳನಿಸ್ವಾಮಿ ಅವರ ನಾಯಕತ್ವವನ್ನು ಉಳಿಸಿಕೊಳ್ಳುವುದರ ಜೊತೆಯಲ್ಲೇ ಪದಚ್ಯುತ ನಾಯಕಿ ವಿ.ಕೆ ಶಶಿಕಲಾ ಅವರಿಗೆ ಪಕ್ಷದ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿದೆ.
ಇಂದು ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬೈಲಾಗೆ ತಿದ್ದುಪಡಿ ತಂದಿದ್ದು, ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದ ಶಶಿಕಲಾ ಅವರನ್ನು ಪಕ್ಷದಿಂದ ಹೊರಹಾಕಿದೆ.
ಇದನ್ನು ಓದಿ: ಎಐಎಡಿಎಂಕೆ ಒಗ್ಗೂಡಿಸಲು, ಲೋಕಸಭಾ ಚುನಾವಣೆಯಲ್ಲಿ ಭಾರೀ ಗೆಲುವು ದಾಖಲಿಸಲು ಎಲ್ಲಾ ಶಕ್ತಿಯನ್ನು ಬಳಸುತ್ತೇನೆ: ವಿಕೆ ಶಶಿಕಲಾ
2017ರಲ್ಲಿ ಮಾಡಲಾಗಿದ್ದ ಬೈಲಾ ತಿದ್ದುಪಡಿಯಲ್ಲಿ ಹೊಸದಾಗಿ ರಚಿಸಲಾಗಿದ್ದ ಪಕ್ಷದ ಸಂಯೋಜಕ(ಪನ್ನೀರಸೆಲ್ವಂ) ಮತ್ತು ಜಂಟಿ ಸಂಯೋಜಕ (ಪಳನಿಸ್ವಾಮಿ) ಸ್ಥಾನಗಳಿಗೆ ಎಲ್ಲಾ ಅಧಿಕಾರಗಳನ್ನು ನೀಡಲಾಗಿದ್ದರೂ ಪ್ರಸ್ತುತ ಹೊಸ ತಿದ್ದುಪಡಿಯೊಂದಿಗೆ ಪಕ್ಷದ ರಚನೆಯನ್ನು ಇನ್ನಷ್ಟು ಬಲಪಡಿಸಲಾಗಿದೆ.
ಹೊಸದಾಗಿ ಮಾಡಿರುವ ತಿದ್ದುಪಡಿಗಳಿಂದ ಇಬ್ಬರ ನಾಯಕತ್ವವನ್ನು ಅಧಿಕೃತಗೊಳಿಸಲಾಗಿದ್ದು, ಸಂಯೋಜಕ ಮತ್ತು ಜಂಟಿ ಸಂಯೋಜಕನ ಸ್ಥಾನಕ್ಕೆ ಆಯ್ಕೆ ಮಾಡಲು ಪಕ್ಷದ ಪ್ರಾಥಮಿಕ ಸದಸ್ಯರ ಏಕ ಮತ ಚಲಾವಣೆಯನ್ನು ಕಡ್ಡಾಯಗೊಳಿಸಲಾಗಿದೆ. ಎಐಎಡಿಎಂಕೆ ಪ್ರಕಾರ, ಶಶಿಕಲಾ ಅವರು ಪಕ್ಷದ ಸದಸ್ಯೆ ಅಲ್ಲ ಎಂದು ಮೂಲಗಳು ತಿಳಿಸಿವೆ.
‘ಪಕ್ಷದ ನಾಯಕತ್ವವನ್ನು ಆಯ್ಕೆ ಮಾಡಲು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಪ್ರಾಥಮಿಕ ಸದಸ್ಯರಾಗಿರುವವರು ಮಾತ್ರ ಮತ ಚಲಾಯಿಸಲು ಅರ್ಹರು’ ಎಂದು ಹಿರಿಯ ಮುಖಂಡ ಡಿ. ಜಯಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.