ದೇಶ

ಭೂಗತ ಪಾತಕಿ ಸುರೇಶ್‌ ಪೂಜಾರಿ ಭಾರತಕ್ಕೆ ಗಡಿಪಾರು: ಮುಂಬೈ ಪೊಲೀಸರ ವಶಕ್ಕೆ ಗ್ಯಾಂಗ್ ಸ್ಟರ್!

Shilpa D

ಮುಂಬೈ: ಹಲವಾರು ಸುಲಿಗೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಭೂಗತ ಪಾತಕಿ ಸುರೇಶ್ ಪೂಜಾರಿಯನ್ನು ಫಿಲಿಪೈನ್ಸ್​ನಿಂದ  ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಥಾಣೆ, ಕಲ್ಯಾಣ್, ಉಲ್ಲಾಸನಗರ ಹಾಗೂ ಡೊಂಬಿವಿಲಿಯಲ್ಲಿ ನಡೆದ ಸುಲಿಗೆ ಪ್ರಕರಣಗಳಲ್ಲಿ ಆತ  ಪೊಲೀಸರಿಗೆ ಬೇಕಾಗಿದ್ದ, ನಿನ್ನೆ ತಡರಾತ್ರಿ  ಆತನನ್ನು ದೆಹಲಿಗೆ ಕರೆತರಲಾಗಿದೆ. ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಬೇಹುಗಾರಿಕೆ ದಳ ಹಾಗೂ ಸಿಬಿಐ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಐಬಿ ಹಾಗೂ ಸಿಬಿಐ ಅಧಿಕಾರಿಗಳು  ವಿಚಾರಣೆ ನಡೆಸಿದ ನಂತರ ಆತನನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಆತನನ್ನು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲು ಮುಂಬೈ ಅಪರಾಧ ವಿಭಾಗದ ತಂಡವೊಂದು ಈಗಾಗಲೇ ದೆಹಲಿಗೆ ತೆರಳಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ

ಮುಂಬೈ ಹಾಗೂ  ಥಾಣೆ ಪೊಲೀಸರು ಕ್ರಮವಾಗಿ 2017, 2018ರಲ್ಲಿ ಸುರೇಶ್ ಪೂಜಾರಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರು. 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪೂಜಾರಿಯನ್ನು ಅಕ್ಟೋಬರ್‌ನಲ್ಲಿ ಫಿಲಿಪೈನ್ಸ್‌ನಲ್ಲಿ ಬಂಧಿಸಲಾಗಿತ್ತು.

ಸುರೇಶ್ ಪೂಜಾರಿ ವಿರುದ್ಧ ಥಾಣೆಯಲ್ಲಿ ಒಟ್ಟು 23 ಸುಲಿಗೆ ಪ್ರಕರಣಗಳು ದಾಖಲಾಗಿದ್ದು, ಆತ ಗ್ಯಾಂಗ್​ಸ್ಟರ್ ರವಿ ಪೂಜಾರಿಯ ಹತ್ತಿರದ ಸಂಬಂಧಿಯಾಗಿದ್ದನು. 2007ರಲ್ಲಿ ಆತ ರವಿ ಪೂಜಾರಿಯಿಂದ ದೂರ ಸರಿದು ವಿದೇಶಕ್ಕೆ ಪರಾರಿಯಾಗಿದ್ದನು.

SCROLL FOR NEXT