ಚೆನ್ನೈ: 'ಮೆಟ್ರೋಮ್ಯಾನ್' ಇ ಶ್ರೀಧರನ್ ಅವರು ರಾಜಕಾರಣದ ಹಾದಿ ಅಷ್ಟು ಸುಲಭವಲ್ಲ ಎಂಬ ಪಾಠ ಕಲಿತಂತಿದೆ. ಈ ವರ್ಷದ ಏಪ್ರಿಲ್ನಲ್ಲಿ ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ ಇ ಶ್ರೀಧರನ್ ಅವರು ಗುರುವಾರ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.
ಇಂದು ಮಲಪ್ಪುರಂನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀಧರನ್, ಇನ್ನು ಮುಂದೆ ತಾವು ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ವಿಧಾನಸಭಾ ಚುನಾವಣೆಯ ಸೋಲಿನಿಂದ ಪಾಠ ಕಲಿತಿದ್ದೇನೆ. ಹೇಗಾದರೂ ಮಾಡಿ ದೇಶ ಸೇವೆ ಮಾಡುತ್ತೇನೆ. ಆದರೆ ರಾಜಕೀಯದಲ್ಲಿ ಇರಲ್ಲ ಎಂದು 89ರ ಹರೆಯದ ತಂತ್ರಜ್ಞ ತಿಳಿಸಿದ್ದಾರೆ.
ಇದನ್ನು ಓದಿ: ಸೋತರೂ ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಂಡ ಮೆಟ್ರೋ ಮ್ಯಾನ್ ಶ್ರೀಧರನ್: ಪರಿಶಿಷ್ಟರ ಕುಟುಂಬಕ್ಕೆ ವಿದ್ಯುತ್ ಸೌಕರ್ಯ!
"ನನ್ನ ದೇಶಕ್ಕೆ ಸೇವೆ ಸಲ್ಲಿಸಲು ನನಗೆ ರಾಜಕೀಯ ಅಗತ್ಯವಿಲ್ಲ. ನಾನು ಈಗಾಗಲೇ ಮೂರು ಟ್ರಸ್ಟ್ಗಳ ಮೂಲಕ ಅದನ್ನು ಮಾಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಶ್ರೀಧರನ್ ಅವರು ಕಾಂಗ್ರೆಸ್ ಅಭ್ಯರ್ಥಿ ಶಫಿ ಪರಂಬಿಲ್ ವಿರುದ್ಧ 3,859 ಮತಗಳ ಅಂತರದಿಂದ ಸೋತಿದ್ದರು. ಶ್ರೀಧರನ್ ಅವರು ಕೇರಳ ವಿಧಾನಸಭೆ ಚುನಾವಣೆಗೂ ಒಂದು ತಿಂಗಳ ಮುನ್ನ ಬಿಜೆಪಿ ಸೇರಿದ್ದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಶ್ರೀಧರನ್ ಚುನಾವಣೆಗೂ ಮುನ್ನ ಹೇಳಿದ್ದರು.