ದೇಶ

ಲಖಿಂಪುರ ಹಿಂಸಾಚಾರ ಪ್ರಕರಣ: ಸಚಿವ ಅಜಯ್ ಮಿಶ್ರಾ ಓರ್ವ ಅಪರಾಧಿ; ರಾಹುಲ್​ ಗಾಂಧಿ ವಾಗ್ದಾಳಿ

Vishwanath S

ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಸಚಿವ ಅಜಯ್ ಮಿಶ್ರಾ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಆತ ಒಬ್ಬ ಅಪರಾಧಿ ಎಂದು ಹೇಳಿದ್ದಾರೆ.

ಅಲ್ಲದೇ ತಕ್ಷಣ ಅಜಯ್​ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಾಲ್ವರು ರೈತರನ್ನು ಹತ್ಯೆಗೈದ ಲಖಿಂಪುರ ಖೇರಿ ಹಿಂಸಾಚಾರ ಘಟನೆಯಲ್ಲಿ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಕೂಡ ಓರ್ವ ಆರೋಪಿಯಾಗಿದ್ದಾರೆ.

ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿದಾಗ ಲೋಕಸಭೆಯಲ್ಲಿ ಗದ್ದಲ ಉಂಟಾಯಿತು. “ಸಚಿವರು ರಾಜೀನಾಮೆ ನೀಡಬೇಕು. ಅವರು ಓರ್ವ ಅಪರಾಧಿ” ಎಂದು ರಾಹುಲ್​ ಗಾಂಧಿ ಲೋಕಸಭೆಯಲ್ಲಿ ಹೇಳಿದರು. ತನಿಖಾ ಪೊಲೀಸ್ ತಂಡ ಈ ಘಟನೆ “ಯೋಜಿತ ಪಿತೂರಿ” ಎಂದು ಹೇಳಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದವು.

ಲಖಿಂಪುರ ಖೇರಿಯಲ್ಲಿ ನಡೆದ ಹತ್ಯೆಯ ಬಗ್ಗೆ ಮಾತನಾಡಲು ಪ್ರತಿಪಕ್ಷಗಳಿಗೆ ಅವಕಾಶ ನೀಡಬೇಕು. ಈ ಘಟನೆಯಲ್ಲಿ ಸಚಿವರ ಕೈವಾಡವಿದೆ. ಇದು ಪಿತೂರಿ ಎಂದು ಹೇಳಲಾಗಿದೆ ಎಂದು ಗಾಂಧಿ ಹೇಳಿದರು.

ಪ್ರತಿಪಕ್ಷಗಳು “ಲಖಿಂಪುರ ಸಂತ್ರಸ್ತರಿಗೆ ನ್ಯಾಯ” ಒದಗಿಸಬೇಕು ಎಂದು ಆಗ್ರಹಿಸುವ ಫಲಕಗಳನ್ನು ಹಿಡಿದು, “ಗೃಹ ಸಚಿವರನ್ನು ವಜಾಗೊಳಿಸುವಂತೆ” ಸರ್ಕಾರಕ್ಕೆ ಕರೆ ನೀಡಿದರು. ಲೋಕಸಭೆಯಲ್ಲಿ ಗುರುವಾರ ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರಿ ಗದ್ದಲ ನಡೆಯಿತು.

SCROLL FOR NEXT