ದೇಶ

ಕೇಂದ್ರದ 12 ಸಚಿವರಿಗೆ ಕೊಕ್ ಕೊಟ್ಟಿದ್ದೇಕೆ?

Srinivasamurthy VN

ನವದೆಹಲಿ: ಕೇಂದ್ರ ಸಂಪುಟ ಪುನರ್ ರಚನೆಯಲ್ಲಿ 12 ಸಚಿವರು ಸ್ಥಾನ ಕಳೆದುಕೊಂಡಿದ್ದಾರೆ. ಕೋವಿಡ್-19 ಅಲೆಯ ಅಬ್ಬರದಲ್ಲಿ ಬಹುಶಃ ಬಿಜೆಪಿಯೊಳಗೆ 'ಬ್ರಾಂಡ್ ಮೋದಿ' ಇಮೇಜ್ ಕುಗ್ಗಲು ಕಾರಣರಾಗಿದ್ದಾರೆ ಎನ್ನಲಾದ ಈ ಸಚಿವರು ಅದಕ್ಕೆ ಬೆಲೆ ತೆತ್ತಿದ್ದಾರೆ ಎನ್ನಲಾಗಿದೆ.

ಹರ್ಷವರ್ಧನ್, ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಸ್ಥಾನ ಕಳೆದುಕೊಂಡವರಲ್ಲಿ ಪ್ರಮುಖರು. ಕೊರೋನಾ 2ನೇ ಅಲೆ ವೇಳೆ ಇವರ ಕಾರ್ಯಕ್ಷಮತೆಯಲ್ಲಿನ ವೈಫಲ್ಯದ ಕಾರಣಕ್ಕೆ ಇವರನ್ನು ಪದಚ್ಯುತಗೊಳಿಸಲಾಗಿದೆ ಎಂಬ ವಿಶ್ಲೇಷಣೆಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

ಮಹಾರಾಷ್ಟ್ರ, ಕೇರಳ ಹಾಗೂ ಇತರ ಕೆಲ ರಾಜ್ಯಗಳು ಸಾಂಕ್ರಾಮಿ ರೋಗದ ಕಪಿಮುಷ್ಟಿಯಲ್ಲಿ ಸಿಲುಕಿರುವ ನಡುವೆಯೇ 'ಸಾಂಕ್ರಾಮಿಕದ ವಿರುದ್ಧದ ಜಯ'ಕ್ಕಾಗಿ ಬಿಜೆಪಿ ಮುಖಂಡರು ಪ್ರಧಾನಿಯವರ ಸಮರ್ಥ ನಾಯಕತ್ವದ ಗುಣಗಾನ ಮಾಡುತ್ತಿದ್ದರು. ಆದರೆ ಕೊರೋನಾ ಎರಡನೇ ಅಲೆಯನ್ನು ಸಮರ್ಪಕವಾಗಿ ಅಂದಾಜಿಸದ ಕಾರಣಕ್ಕೆ ಆರೋಗ್ಯ ಸಚಿವ ಹರ್ಷವರ್ಧನ್ ಬೆಲೆ ತೆತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನ್ಯಾಯಾಲಯದಲ್ಲಿ ಹಲವು ಮುಜುಗರಗಳನ್ನು ಎದುರಿಸಲು ಕಾರಣರಾದ ಕಾನೂನು ಮತ್ತು ನ್ಯಾಯಾಂಗ ಖಾತೆ ಸಚಿವ ರವಿಶಂಕರ ಪ್ರಸಾದ್ (66) ಕೂಡಾ ಬೆಲೆ ತೆರಬೇಕಾಯಿತು.

ಜನರು ಆಸ್ಪತ್ರೆ ಬೆಡ್ ಪಡೆಯಲು ಹೆಣಗುವ ಮಧ್ಯೆಯೇ ತನ್ನ ಲಸಿಕೆ ಖರೀದಿ ನೀತಿ ಮತ್ತು ಆಮ್ಲಜನಕ ನಿರ್ವಹಣೆ ನಿಲುವಿನ ಬಗ್ಗೆ ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರ ಹರಸಾಹಸ ಮಾಡುತ್ತಿತ್ತು. ಇದರಿಂದಾಗಿ ಜನಸಾಮಾನ್ಯರು, ಕೋವಿಡ್-19 ಎರಡನೇ ಅಲೆ ನಿಯಂತ್ರಣದ ವೈಫಲ್ಯವನ್ನು ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹೊರಿಸುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಲು ಕಾರಣವಾಗಿತ್ತು ಎಂದು ಬಿಜೆಪಿ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.

ಇನ್ನು ಸರ್ಕಾರದ ವಕ್ತಾರನ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಲು ವಿಫಲವಾದದ್ದು ಜಾವಡೇಕರ್ (70) ಅವರ ತಲೆದಂಡಕ್ಕೆ ಕಾರಣ ಎನ್ನಲಾಗಿದೆ.

ರಮೇಶ್ ಪೋಖ್ರಿಯಾಲ್ ಇನ್ನಷ್ಟು ಕ್ರಿಯಾಶೀಲರಾಗಿರಬೇಕಿತ್ತು ಎಂಬ ಕಾರಣಕ್ಕೆ ಹುದ್ದೆ ಕಳೆದುಕೊಂಡಿದ್ದರೆ, ಡಿ.ವಿ.ಸದಾನಂದ ಗೌಡ ಇದೇ ಕಾರಣಕ್ಕೆ ಮೋದಿಯವರ ಮೊದಲ ಅವಧಿಯಲ್ಲೇ ರೈಲ್ವೆ ಖಾತೆಯನ್ನು ಕಳೆದುಕೊಂಡವರು. ಸಂತೋಷ್ ಗಂಗ್ವಾರ್, ಬಾಬುಲ್ ಸುಪ್ರಿಯೊ, ಸಂಜಯ್ ಧೋತ್ರೆ, ರತನ್‌ಲಾಲ್ ಕಟಾರಿಯಾ, ಪ್ರತಾಪ್‌ಚಂದ್ರ ಸಾರಂಗಿ, ರೇಬಶ್ರೀ ಚೌಧರಿ ತಮ್ಮ ಹುದ್ದೆಗಳನ್ನು ಕಳೆದುಕೊಂಡಿರುವ ರಾಜ್ಯ ಸಚಿವರಾಗಿದ್ದಾರೆ.

SCROLL FOR NEXT