ದೇಶ

ಶಸ್ತ್ರಾಸ್ತ್ರ ಪರವಾನಗಿ ಹಗರಣ; ಶ್ರೀನಗರದ ಹಲವೆಡೆ ಸಿಬಿಐ ದಾಳಿ

Manjula VN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಶಸ್ತ್ರಾಸ್ತ್ರ ಪರವಾನಗಿ ನೀಡುವಲ್ಲಿ ಅಕ್ರಮ ನಡೆದ ಆರೋಪ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಶ್ರೀನಗರದ ಹಲವೆಡೆ ಶನಿವಾರ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಪ್ರಕರಣ ಸಂಬಂಧ ಜಮ್ಮು ಮತ್ತು ಕಾಶ್ಮೀರದ ಹಿರಿಯ ಐಎಎಸ್ ಅಧಿಕಾರಿ ಶಾಹಿದ್ ಇಕ್ಬಾಲ್ ಚೌಧುರಿ ಅವರ ನಿವಾಸದ ಮೇಲೆಯೂ ದಾಳಿ ಮಾಡಿರುವ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. 

ಜಮ್ಮು ಮತ್ತು ಕಾಶ್ಮೀರ ಕಾರ್ಯದರ್ಶಿ (ಬುಡಕಟ್ಟು ವ್ಯವಹಾರ) ಮತ್ತು ಯುವಜನ ಯೋಜನೆ ಸಿಇಒ ಆಗಿರುವ ಚೌಧುರಿ ಅವರು ಕಥುವಾ, ರಿಯಾಸಿ, ರಜೌರಿ ಮತ್ತು ಉಧಾಂಪುರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು. 

ಈ ಅವಧಿಯಲ್ಲಿ ಅವರು ಇತರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜನರಿಗೆ ನಕಲಿ ಹೆಸರಿನಲ್ಲಿ ಸಾವಿರಾರು ಬಂದೂಕು ಪರವಾನಗಿಗಳನ್ನು ವಿತರಿಸಿದ್ದರು ಎಂದು ಆರೋಪಿಸಲಾಗಿದೆ. 

ಪ್ರಕರಣ ಸಂಬಂಧ ಕನಿಷ್ಠ 8 ಮಂದಿ ಮಾಜಿ ಉಪ ಆಯುಕ್ತರನ್ನು ಕೇಂದ್ರ ತನಿಖಾ ಸಂಸ್ಥೆ ವಿಚಾರಣೆಗೆ ಒಳಪಡಿಸುತ್ತಿದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ 2012ರಿಂದ ಎರಡು ಲಕ್ಷಕ್ಕೂ ಅಧಿಕ ಬಂದೂಕು ಪರವಾನಗಿಗಳನ್ನು ಅಕ್ರಮವಾಗಿ ವಿತರಿಸಲಾಗಿದೆ. ಇದು ಭಾರತದ ಅತಿ ದೊಡ್ಡ ಬಂದೂಕು ಪರವಾನಗಿ ಜಾಲ ಎಂದು ಹೇಳಲಾಗಿದೆ.

ಕಳೆದ ವರ್ಷ ಐಎಎಸ್ ಅಧಿಕಾರಿ ರಾಜೀವ್ ರಂಜನ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತು. 

SCROLL FOR NEXT