ದೇಶ

ಭಯೋತ್ಪಾದನಾ ಪ್ರಕರಣ: ಜಮ್ಮು-ಕಾಶ್ಮೀರದ 14 ಪ್ರದೇಶಗಳಲ್ಲಿ ಎನ್ಐಎ ದಾಳಿ, ಪರಿಶೀಲನೆ

Manjula VN

ಶ್ರೀನಗರ: ಎರಡು ಪ್ರತ್ಯೇಕ ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ 14 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆಂದು ಶನಿವಾರ ತಿಳಿದುಬಂದಿದೆ. 

ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಜಮ್ಮುವಿನ ಬಸ್ ನಿಲ್ದಾಣವೊಂದರಲ್ಲಿ ವಶಕ್ಕೆ ಪಡೆದಿದ್ದ 7 ಕೆಜಿ ಐಇಡಿ ಹಾಗೂ ಲಷ್ಕರ್-ಇ-ಮುಸ್ತಾಫಾ ಮುಖ್ಯಸ್ಥ ಹಿದಾಯತುಲ್ಲಾ ಮಲ್ಲಿಕ್ ಬಂಧನದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್ಐಎ ಇಂದು ಜಮ್ಮುವಿನ 14 ಪ್ರದೇಶಗಳಲ್ಲಿ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ. 

ಈ ಎರಡೂ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಪುಲ್ವಾಮಾ, ಶೋಪಿಯಾನ್, ಶ್ರೀನಗರ, ಅನಂತ್ ನಾಗ್, ಜಮ್ಮು ಮತ್ತು ಬನಿಹಾಲ್ ನಲ್ಲಿ ಇಂದು ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. 

ಬಂಧನಕ್ಕೊಳಗಾಗಿದ್ದ ಹಿದಾಯತುಲ್ಲಾ ಮಲ್ಲಿಕ್ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಚೇರಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರುವುದು ಸೇರಿದಂತೆ ಹಲವು ದಾಳಿಗಳ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆಂದು ಹೇಳಲಾಗುತ್ತಿದೆ. 

ಐಇಡಿ ನಾಶ ಪಡಿಸಿದ ಬಾಂಬ್ ನಿಷ್ಕ್ರಿಯ ದಳ
ಈ ನಡುವೆ ರಜೌರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಧಾರಿತ ಸ್ಫೋಟಕ ವಸ್ತು ಕಂಡು ಬಂದಿದ್ದು, ಸ್ಥಳಕ್ಕೆ ದೌಡಾಯಿಸಿರುವ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಐಇಡಿಯನ್ನು ನಾಶಪಡಿಸಿದೆ ಎಂದು ತಿಳಿದುಬಂದಿದೆ.
 

SCROLL FOR NEXT