ಜಮ್ಮು: ಜಮ್ಮುವಿನ ಪ್ರಸಿದ್ಧ ಯಾತ್ರಾತಾಣ ವೈಷ್ಣೋದೇವಿ ದೇವಾಲಯದ ಸಂಕೀರ್ಣದೊಳಗಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭಸಿದ್ದು, ಸಾಕಷ್ಟು ಪ್ರಮಾಣದ ನಗದು ಮತ್ತು ದಾಖಲೆಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅವಘಡ ನಡೆದಿದೆ ಎಂದು ಹೇಳಲಾಗಿದ್ದು, ಸಂಜೆ 4.15 ರ ಸುಮಾರಿಗೆ ಗರ್ಭಗೃಹದ ಪಕ್ಕದಲ್ಲಿರುವ ಕಾಳಿಕಾ ಭವನದ ನಗದು ಎಣಿಕೆಯ ಕೋಣೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ಆದರೆ ಬೆಂಕಿಯಿಂದಾಗಿ ಅಪಾರ ಪ್ರಮಾಣದ ನಗದು ಸೇರಿದಂತೆ ದಾಖಲೆಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ರಿಯಾಸಿ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದರ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದು, ಮಾತಾ ವೈಷ್ಣೋದೇವಿ ದೇವಾಲಯ ಸಂಕೀರ್ಣದ ಒಳಗೆ ಇರುವ ಗರ್ಭಗೃಹದ ಪಕ್ಕದಲ್ಲಿರುವ ಕಾಳಿಕಾ ಭವನದ ನಗದು ಎಣಿಕೆಯ ಕೋಣೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.