ದೇಶ

'ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ': ರೈತರಿಂದ ದೇಶಾದ್ಯಂತ ಜೂ.26ಕ್ಕೆ ರಾಜಭವನಕ್ಕೆ ಮುತ್ತಿಗೆ 

Sumana Upadhyaya

ಸೊನಪತ್: ದೇಶಾದ್ಯಂತ ರಾಜ ಭವನಗಳಿಗೆ ಸಂಯುಕ್ತ ಕಿಸಾನ್ ಮೋರ್ಚ ಇದೇ 26ರಂದು ಮುತ್ತಿಗೆ ಹಾಕಿ 'ಕೃಷಿಯನ್ನು ಉಳಿಸಿ, ಲೋಕದ ಜನರನ್ನು ಉಳಿಸಿ ದಿವಸ'(ಖೇತಿ ಬಚಾವೊ, ಲೋಕತಂತ್ರ ಬಚಾವೊ ದಿವಸ)ವನ್ನು ಆಚರಿಸಲಿದೆ.

ಭಾರತದ ಇತಿಹಾಸದಲ್ಲಿ 1975ರ ಜೂನ್ 26 ಕರಾಳ ದಿನ, ಆ ದಿನ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಈಗಿನ ಮೋದಿ ಸರ್ಕಾರದ ಪರಿಸ್ಥಿತಿ ಕೂಡ ಅದಕ್ಕಿಂತ ಭಿನ್ನವಾಗಿಲ್ಲ, ಇದೊಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ. ನಾಡಿದ್ದು 26ಕ್ಕೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಾವು ಪ್ರತಿಭಟನೆ ಆರಂಭಿಸಿ 7 ತಿಂಗಳುಗಳು ಕಳೆಯುತ್ತಿವೆ. ಹೀಗಾಗಿ ಆ ದಿನವ್ನು ಖೇತಿ ಬಚಾವೊ, ಲೋಕತಂತ್ರ ಬಚಾವೊ ದಿವಸವೆಂದು ಆಚರಿಸಲಾಗುವುದು. ದೇಶಾದ್ಯಂತ ರಾಜಭವನದ ಹೊರಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹರ್ಯಾಣದ ಅಖಿಲ ಭಾರತ ಕಿಸಾನ್ ಸಭಾದ ಉಪಾಧ್ಯಕ್ಷ ಇಂದರ್ಜಿತ್ ಸಿಂಗ್ ತಿಳಿಸಿದ್ದಾರೆ.

ದೇಶದ ರಾಷ್ಟ್ರಪತಿಗಳನ್ನುದ್ದೇಶಿಸಿ ಸಂಘ ಮಾಡುವ ಮನವಿಯನ್ನು ರಾಜ್ಯಪಾಲರುಗಳ ಮುಖಾಂತರ ಸಲ್ಲಿಸಲಾಗುವುದು ಎಂದರು.

ದೇಶದ ರಾಜಧಾನಿ ದೆಹಲಿಯ ಗಡಿಭಾಗದಲ್ಲಿ ರೈತರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ಮಧ್ಯೆ ಹಲವು ಸುತ್ತುಗಳ ಮಾತುಕತೆ ನಡೆದರೂ ಕೂಡ ಪ್ರಯೋಜನವಾಗಿಲ್ಲ.

ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನವೆಂಬರ್ 26 ರಿಂದ ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ರೈತ ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ರ ಒಪ್ಪಂದದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ಇಂದು ಇಬ್ಬರು ಪೊಲೀಸರ ಮೇಲೆ ಹಲ್ಲೆ: ಮೊನ್ನೆ ಜೂನ್ 10ರಂದು ದೆಹಲಿಯ ಸಿಂಘು ಗಡಿಭಾಗದಲ್ಲಿ ಪ್ರತಿಭಟನಾ ನಿರತ ರೈತರ ಫೋಟೋ ತೆಗೆದ ಇಬ್ಬರು ಸಹಾಯಕ ಸಬ್ ಇನ್ಸ್ ಪೆಕ್ಟರ್ ಮೇಲೆ ಪ್ರತಿಭಟನಾ ನಿರತ ರೈತರು ಹಲ್ಲೆ ಮಾಡಿದ್ದು ಈ ಸಂಬಂಧ ನರೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT