ದೇಶ

ಯುಪಿ: ಮಾಸ್ಕ್ ಧರಿಸದಿದ್ದಕ್ಕೆ ಮಾತಿನ ಚಕಮಕಿ, ಬ್ಯಾಂಕಿನ ಒಳಗಡೆ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ!

Nagaraja AB

ಲಖನೌ: ಮಾಸ್ಕ್ ಧರಿಸದಿದ್ದಕ್ಕೆ ಮಾತಿನ ಚಕಮಕಿ ನಡೆದ ನಂತರ ಖಾಸಗಿ ಭದ್ರತಾ ಸಿಬ್ಬಂದಿಯೊಬ್ಬರು, ಗ್ರಾಹಕರೊಬ್ಬರ ಮೇಲೆ  ಬ್ಯಾಂಕಿನ ಒಳಗಡೆಯೇ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಇಂದು ಈ ಘಟನೆ ನಡೆದಿದ್ದು, ಗಾಯಾಳುವನ್ನು ರೈಲ್ವೆ ನೌಕರ ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಭದ್ರತಾ ಸಿಬ್ಬಂದಿಯನ್ನು  ಉತ್ತರ ಪ್ರದೇಶ ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಕುಮಾರ್ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮಾಸ್ಕ್ ಧರಿಸದೆ ಬ್ಯಾಂಕಿನೊಳಗಡೆ ಬರುತ್ತಿದ್ದ ಗ್ರಾಹಕನನ್ನು ತಡೆದಾಗ ಇಬ್ಬರ ನಡುವೆ ಜಗಳ ನಡೆದು ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಮಾಸ್ಕ್ ಧರಿಸದಿರುವುದಕ್ಕೆ ಜಗಳ ಆರಂಭವಾಯಿತು. ತದನಂತರ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿರುವುದಾಗಿ  ಕುಮಾರ್ ಅವರ ಸಂಬಂಧಿಕರು ತಿಳಿಸಿದ್ದಾರೆ. ಈ ಸಂಬಂಧ ವಿಚಾರಣೆ ನಡೆಯುತ್ತಿರುವುದಾಗಿ ಬರೇಲಿ ಪೊಲೀಸ್ ಮುಖ್ಯಸ್ಥ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.

SCROLL FOR NEXT