ದೇಶ

2 ತಿಂಗಳು ಉಚಿತ ರೇಷನ್; ಆಟೋ, ಟ್ಯಾಕ್ಸಿ ಚಾಲಕರಿಗೆ 5,000 ರೂ. ಆರ್ಥಿಕ ನೆರವು: ದೆಹಲಿ ಸಿಎಂ ಕೇಜ್ರಿವಾಲ್

Lingaraj Badiger

ನವದೆಹಲಿ: ಕೊರೋನಾ ವೈರಸ್ ಎರಡನೇ ಅಲೆ ನಿಯಂತ್ರಿಸಲು ದೆಹಲಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ರಾಷ್ಟ್ರ ರಾಜಧಾನಿಯಲ್ಲಿ ರೇಷನ್ ಕಾರ್ಡ್ ಹೊಂದಿರುವ 72 ಲಕ್ಷ ಮಂದಿಗೆ ಮುಂದಿನ ಎರಡು ತಿಂಗಳವರೆಗೆ ಉಚಿತ ಪಡಿತರ ನೀಡುವುದಾಗಿ ಮತ್ತು ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ತಲಾ 5,000 ರೂ. ಆರ್ಥಿಕ ನೆರವು ನೀಡುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ಆದಾಗ್ಯೂ, ಕೊರೋನಾ ಚೈನ್ ಬ್ರೇಕ್ ಮಾಡಲು ರಾಷ್ಟ್ರ ರಾಜಧಾನಿಯಲ್ಲಿ ವಿಧಿಸಲಾದ ಲಾಕ್‌ಡೌನ್ ಎರಡು ತಿಂಗಳವರೆಗೆ ಇರುತ್ತದೆ ಎಂದು ಅರ್ಥವಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಲಾಕ್ ಡೌನ್ ಅಗತ್ಯವಿಲ್ಲ ಎಂದು ಕೇಜ್ರಿವಾಲ್ ಆಶಿಸಿದ್ದಾರೆ. 

ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ದೆಹಲಿ ಸರ್ಕಾರವು 1.56 ಲಕ್ಷ ಆಟೋ ಮತ್ತು ಟ್ಯಾಕ್ಸಿ ಡ್ರೈವರ್‌ಗಳಿಗೆ ತಲಾ 5,000 ರೂ.ಗಳ ಆರ್ಥಿಕ ನೆರವು ನೀಡಿತ್ತು. ಈಗ ಮತ್ತೆ ಅವರಿಗೆ ಸಹಾಯ ಮಾಡಲು 5 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದಿದ್ದಾರೆ.

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಲಾಕ್ ಡೌನ್ ಅನ್ನು ಮೇ 10 ರವರೆಗೆ ವಿಸ್ತರಿಸಲಾಗಿದೆ.

SCROLL FOR NEXT