ದೇಶ

ತಿರುಪತಿ: ರೂಯಿಯಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ವ್ಯತ್ಯಯ; 11 ಕೋವಿಡ್-19 ರೋಗಿಗಳು ಸಾವು!

Srinivas Rao BV

ತಿರುಪತಿ: ಆಕ್ಸಿಜನ್ ಪೂರೈಕೆ ವ್ಯತ್ಯಯಗೊಂಡ ಪರಿಣಾಮ ಕೋವಿಡ್-19 ಗೆ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ಜೀವಕಳೆದುಕೊಂಡಿರುವ ಘಟನೆ ತಿರುಪತಿಯ ಎಸ್ ವಿ ಆರ್ ರೂಯಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ. 

ಜಿಲ್ಲಾಧಿಕಾರಿ ಹರಿ ನಾರಾಯಣ್ ಅವರ ಪ್ರಕಾರ, ಚೆನ್ನೈ ನಿಂದ ಬರಬೇಕಿದ್ದ ಆಕ್ಸಿಜನ್ ಟ್ಯಾಂಕರ್  ತಲುಪುವುದು ವಿಳಂಬವಾದ ಕಾರಣ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ವೆಂಟಿಲೇಟರ್ ಗಳ ಸಹಾಯದಿಂದ ಉಳಿದಿದ್ದ ರೋಗಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವಿನ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ಆಕ್ಸಿಜನ್ ಪೂರೈಸುವುದಕ್ಕೆ ವೈದ್ಯರು ಬಲ್ಕ್ ಸಿಲೆಂಡರ್ ಗಳನ್ನು  ಬಳಕೆ ಮಾಡಿದ್ದಾರೆ. ಆಕ್ಸಿಜನ್ ಕೊರತೆ ಎದುರಿಸಿದ್ದಕ್ಕಗಿ ಇನ್ನೂ 5 ಮಂದಿಯ ಜೀವ ಅಪಾಯದಲ್ಲಿದೆ.

"ರಾತ್ರಿ 8-8:30 ಕ್ಕೆ ಈ ಘಟನೆ ನಡೆದಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ 11 ಮಂದಿಯ ಸಾವು ಸಂಭವಿಸಿದೆ. ಆಕ್ಸಿಜನ್ ಟ್ಯಾಂಕರ್ ಆಗಮಿಸಿದ ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ" ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಘಟನೆಯ ನಂತರದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು 30 ಮಂದಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿದಿರುವುದನ್ನು ಖಾತ್ರಿಪಡಿಸಿಕೊಂಡಿದ್ದು, ಅಗತ್ಯ ಆಕ್ಸಿಜನ್ ಪೂರೈಕೆಯನ್ನು ಖಚಿತಪಡಿಸಿಕೊಂಡಿದ್ದಾರೆ. 

ಈ ನಡುವೆ ಹೆಚ್ಚುವರಿ ಆಕ್ಸಿಜನ್ ಪೂರೈಕೆಗಾಗಿ ಬೆಳಿಗ್ಗೆ ಮತ್ತೊಂದು ಆಕ್ಸಿಜನ್ ಟ್ಯಾಂಕರ್ ಬರಲಿದೆ. "ಸೂಕ್ತ ಸಮಯಕ್ಕೆ ಟ್ಯಾಂಕರ್ ಬಂದಿದ್ದರಿಂದ ಹೆಚ್ಚಿನ ಅಪಾಯವನ್ನು ತಡೆಗಟ್ಟಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆ ಬಗ್ಗೆ ಮಾಹಿತಿ ಪಡೆದಿರುವ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ, ಘಟನೆ ಕುರಿತು ವರದಿ ಸಲ್ಲಿಸುವಂತೆ ಕೋರಿದ್ದಾರೆ. 

SCROLL FOR NEXT