ದೇಶ

ಸಕ್ರಿಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ ಎಡಿಎಂಕೆ ಉಚ್ಛಾಟಿತ ನಾಯಕಿ ವಿ ಕೆ ಶಶಿಕಲಾ!

Sumana Upadhyaya

ಚೆನ್ನೈ: ಎಡಿಎಂಕೆಯ ಉಚ್ಛಾಟಿತ ನಾಯಕಿ ವಿ ಕೆ ಶಶಿಕಲಾ ಅವರು ಸಕ್ರಿಯ ರಾಜಕೀಯಕ್ಕ ಮರಳುವ ಸೂಚನೆ ಕೊಟ್ಟಿದ್ದಾರೆ. 
ವಿ ಕೆ ಶಶಿಕಲಾ ಮತ್ತು ಪಕ್ಷದ ಕ್ಯಾಡರ್ ಮಧ್ಯೆ ನಡೆದಿದೆ ಎನ್ನಲಾದ ಪೋನ್ ಸಂಭಾಷಣೆಯ ಆಡಿಯೊ ಕ್ಲಿಪ್ ವೈರಲ್ ಆಗಿದ್ದು ಅದರಲ್ಲಿ ಕೋವಿಡ್ ಸಾಂಕ್ರಾಮಿಕ ತಗ್ಗಿದ ನಂತರ ರಾಜಕೀಯಕ್ಕೆ ಸಕ್ರಿಯವಾಗಿ ಮರಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಎಡಿಎಂಕೆ ಡಿಎಂಕೆ ವಿರುದ್ಧ ಸೋಲನುಭವಿಸಿ ಅಧಿಕಾರ ಕಳೆದುಕೊಂಡಿದೆ. ದೂರವಾಣಿಯಲ್ಲಿ ಮಾತನಾಡುವಾಗ, ನೀವು ಏನೂ ಆತಂಕಪಡಬೇಡಿ, ಪಕ್ಷದಲ್ಲಿನ ಸಮಸ್ಯೆ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸೋಣ, ಧೈರ್ಯವಾಗಿರಿ, ಕೊರೋನಾ ಸೋಂಕು ಇಳಿದ ಮೇಲೆ ನಾನು ಸಕ್ರಿಯವಾಗಿ ಮತ್ತೆ ಬರುತ್ತೇನೆ ಎಂದು ಪಕ್ಷದ ಕ್ಯಾಡರ್ ಗಳಿಗೆ ಶಶಿಕಲಾ ಅವರು ಕ್ಯಾಡರ್ ಗಳಿಗೆ ಹೇಳುತ್ತಿದ್ದು, ನಾವು ನಿಮ್ಮ ಹಿಂದೆ ಇರುತ್ತೇವೆ ಅಮ್ಮಾ ಎಂದು ಹೇಳಿರುವ ಆಡಿಯೊ ವೈರಲ್ ಆಗಿದೆ.

ಎಡಿಎಂಕೆಯಿಂದ ಉಚ್ಛಾಟನೆಗೊಂಡು ಜೈಲಿಗೆ ಹೋಗಿ ಬಂದ ನಂತರ ಕಳೆದ ಮಾರ್ಚ್ ನಲ್ಲಿ ಶಶಿಕಲಾ ಅವರು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದರು. ಅಲ್ಲದೆ ರಾಜಕೀಯಕ್ಕೆ ಹೊರತಾಗಿ ಏನಾದರೊಂದು ಮಾಡುತ್ತೇನೆಂದು ಹೇಳಿದ್ದರು.

ತಮಿಳು ನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಹಚರೆಯಾಗಿದ್ದ ಶಶಿಕಲಾ, ನನ್ನ ಅಕ್ಕ ಜಯಲಲಿತಾ ಅವರ ಆಡಳಿತ ಸಮಯದಲ್ಲಿ ಇದ್ದ ಸುವರ್ಣಾಡಳಿತ ಮತ್ತೆ ತರಲು ಪ್ರಯತ್ನಿಸುತ್ತೇನೆ, ಅವರ ದೃಷ್ಟಿಕೋನದಂತೆ ತಮಿಳು ನಾಡನ್ನು ಮುನ್ನಡೆಸುವ ಶಕ್ತಿಯನ್ನು ದೇವರು ನನಗೆ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಶಶಿಕಲಾ ಹೇಳಿದ್ದರು.

ಕಳೆದ ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆ ಹೊಂದಿ ಬಂದ ನಂತರ ಶಶಿಕಲಾ ಚೆನ್ನೈಯ ಟಿ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಕೇಸಿನಲ್ಲಿ ನಾಲ್ಕು ವರ್ಷಗಳ ಜೈಲುವಾಸವನ್ನು ಅನುಭವಿಸಿದ್ದರು.

ಶಶಿಕಲಾ ಅವರ ಬೆಂಬಲದೊಂದಿಗೆ ಇ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಆದರೆ ಒ ಪನ್ನೀರ್ ಸೆಲ್ವಂ ಬಣ ಶಶಿಕಲಾ ಅವರನ್ನು ಎಡಿಎಂಕೆಯಿಂದ ವಜಾ ಮಾಡಿತ್ತು. ಶಶಿಕಲಾ ವಿರುದ್ಧ ನಿಂತು ನಂತರ ಪನ್ನೀರ್ ಸೆಲ್ವಂ ಬಣದೊಂದಿಗೆ ಸೇರಿದ್ದರು. 2017ರ ಸೆಪ್ಟೆಂಬರ್ ನಲ್ಲಿ ಶಶಿಕಲಾ ಮತ್ತು ದಿನಕರನ್ ಅವರನ್ನು ಪಕ್ಷದಿಂದ ವಜಾ ಮಾಡಲಾಗಿತ್ತು.

SCROLL FOR NEXT