ದೇಶ

ಕೋಟ್ಯಂತರ ರೂ. ವೆಚ್ಚವಾಗುತ್ತಿದ್ದರೂ ಮಾಲಿನ್ಯದಿಂದ ತುಂಬಿರುವ ನಗರಗಳು!

Nagaraja AB

ನವದೆಹಲಿ: ದೇಶದ ಅನೇಕ ಕಡೆಗಳಲ್ಲಿ ವಾಯು ಮಾಲಿನ್ಯದ ಮಟ್ಟ ಅಪಾಯಕಾರಿಯಾಗಿ ಹೆಚ್ಚಾಗುತ್ತಿರುವಂತೆಯೇ, ಅದರ ನಿಯಂತ್ರಣಕ್ಕೆ ಗಣನೀಯ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಖರ್ಚು ಮಾಡುತ್ತಿರುವುದನ್ನು ಸರ್ಕಾರ ಮಾಹಿತಿ ನೀಡಿದೆ. ಆದರೆ, ಅದೆಲ್ಲವೂ ಶೂನ್ಯದಂತೆ ಗೋಚರಿಸುತ್ತಿದೆ. 

2020-21 ಮತ್ತು 2021-22ನೇ ಸಾಲಿನಲ್ಲಿ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ಸುಮಾರು 515 ಕೋಟಿಯನ್ನು ಮಂಜೂರು ಮಾಡಿದೆ. ಅಲ್ಲದೇ, 42 ನಗರ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ 15 ನೇ ಹಣಕಾಸು ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ 2020-21ರಲ್ಲಿ 4, 400 ಕೋಟಿ ಬಿಡುಗಡೆ ಮಾಡಲಾಗಿದೆ. 

ಎನ್ ಸಿಎಪಿ ಅಡಿಯಲ್ಲಿ 290 ಕೋಟಿ ಹಂಚಿಕೆ ಮಾಡಿ, ಮೇಲ್ವಿಚಾರಣಾ ಜಾಲದ ವಿಸ್ತರಣೆ,  ಘನ ತ್ಯಾಜ್ಯ ನಿರ್ವಹಣೆ ಘಟಕದ ಸ್ಥಾಪನೆ, ಮೋಟಾರುರಹಿತ ಸಾರಿಗೆ ಮೂಲಸೌಕರ್ಯ, ಹಸಿರು ಬಫರ್‌ಗಳು, ಮೆಕ್ಯಾನಿಕಲ್ ಸ್ಟ್ರೀಟ್ ಸ್ವೀಪರ್‌ಗಳು, ಕಾಂಪೋಸ್ಟಿಂಗ್ ಘಟಕಗಳು ಇತ್ಯಾದಿಗಾಗಿ  152. 73 ಕೋಟಿಯನ್ನು  2020-21ರಲ್ಲಿ ಬಿಡುಗಡೆ ಮಾಡಲಾಗಿದೆ. 2021-22ರಲ್ಲಿ 225 ಕೋಟಿ ರೂ. ಹಂಚಿಕೆ ಮಾಡಲಾಗಿದೆ. 

ದೇಶಾದ್ಯಂತ ವಾಯು ಮಾಲಿನ್ಯ ಪ್ರಮಾಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಜನವರಿ 2019ರಲ್ಲಿ ಎನ್ ಸಿಎಪಿ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. ಇದು ಐದು ವರ್ಷಗಳ ಕ್ರಿಯಾ ಯೋಜನೆಯಾಗಿದೆ. ಲಭ್ಯವಿರುವ ಅಂತಾರಾಷ್ಟ್ರೀಯ ಅನುಭವಗಳು ಮತ್ತು ರಾಷ್ಟ್ರೀಯ ಅಧ್ಯಯನಗಳನ್ನು ಗಣನೆಗೆ ತೆಗೆದುಕೊಂಡು,  2024 ರ ವೇಳೆಗೆ PM2.5 ಮತ್ತು PM10 ಸಾಂದ್ರತೆಯ ಶೇ. 20-30 ರಷ್ಟು  ಕಡಿತದ ಗುರಿಯನ್ನು ಎನ್ ಸಿಎಪಿ ಅಡಿಯಲ್ಲಿ ಕಲ್ಪಿಸಲಾಗಿದೆ.

ಎನ್ ಸಿಎಪಿ ಅಡಿಯಲ್ಲಿ, 2014-18 ರಿಂದ ಗಾಳಿಯ ಗುಣಮಟ್ಟದ ಡೇಟಾವನ್ನು ಆಧರಿಸಿ ದೇಶಾದ್ಯಂತ 124  ಗುರಿ ಸಾಧಿಸದ ನಗರಗಳನ್ನು ಗುರುತಿಸಲಾಗಿದೆ. ಎನ್ ಸಿಎಪಿ ಅನುಷ್ಠಾನದ ಮೇಲ್ವಿಚಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಟೀರಿಂಗ್, ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿಗಳನ್ನು ರಚಿಸಲಾಗಿದೆ.

ಅಲ್ಲದೆ, ಎನ್‌ಸಿಎಪಿ ಅನುಷ್ಠಾನದ  ಮೇಲ್ವಿಚಾರಣೆ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರ ಮಟ್ಟದ ನೋಡಲ್ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಇವುಗಳ ಹೊರತಾಗಿ, ನಗರಗಳಲ್ಲಿನ ವಾಯು ಮಾಲಿನ್ಯವನ್ನು ನಿಭಾಯಿಸಲು ಕೇಂದ್ರೀಕರಿಸುವ ಅನೇಕ ಕೇಂದ್ರ ಯೋಜನೆಗಳಿವೆ. 2014-2019ರಲ್ಲಿ ನಗರ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಸುಮಾರು 7,365.82 ಕೋಟಿ ರೂ. ಹಂಚಿಕೆ ಮಾಡಲಾಗಿದೆ. 

SCROLL FOR NEXT