ದೇಶ

ಸಾಮಾಜಿಕ ಜಾಲತಾಣ ಅರಾಜಕ; ಸಂಪೂರ್ಣವಾಗಿ ನಿಷೇಧಿಸಬೇಕು: ತುಗ್ಲಕ್ ಸಂಪಾದಕ ಎಸ್ ಗುರುಮೂರ್ತಿ

Srinivas Rao BV

ನವದೆಹಲಿ: ಸಾಮಾಜಿಕ ಜಾಲತಾಣವನ್ನು ಅರಾಜಕ ಎಂದು ಹೇಳಿರುವ ಬರೆಹಗಾರ, ಸಿಎ, ತುಗ್ಲಕ್ ಪತ್ರಿಕೆಯ ಸಂಪಾದಕ ಎಸ್ ಗುರುಮೂರ್ತಿ ಸಾಮಾಜಿಕ ಜಾಲತಾಣಗಳನ್ನು ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. 

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ನಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಪೂರ್ವದಲ್ಲಿದ್ದ ಮಾಧ್ಯಮಕ್ಕೂ ಇಂದಿನ ದಿನಗಳಲ್ಲಿನ ಮಾಧ್ಯಮಗಳಿಗೂ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. 

ಮಾಧ್ಯಮಗಳಿಗೆ ಭಯಪಡದವರು ಯಾರು? ಎಂಬ ವಿಷಯದ ಬಗ್ಗೆ ಪಿಸಿಐ ಸೆಮಿನಾರ್ ನ್ನು ಆಯೋಜಿಸಿತ್ತು.

ಸಾಮಾಜಿಕ ಜಾಲತಾಣ ಪ್ರತಿಯೊಬ್ಬರ ಘನತೆಗೂ ಅಪಾಯವೇ ಆಗಿದ್ದು, ರಾಷ್ಟ್ರೀಯ ಭದ್ರತೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳಿಗೂ ಅಪಾಯಕಾರಿಯಾಗಿದೆ ಎಂದು ಗುರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. 

ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರ ಗಣ್ಯರು, ಗುರುಮೂರ್ತಿ ಅವರ ಅಭಿಪ್ರಾಯಕ್ಕಿಂತಲೂ ಭಿನ್ನ ಅಭಿಪ್ರಾಯ ಮಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ದೃಢಪಡಿಸದ ಮಾಹಿತಿ, ನಕಲಿ, ಸುಳ್ಳು ಮಾಹಿತಿಗಳ ಪ್ರಸಾರವನ್ನು ತಡೆಗಟ್ಟುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಸಾಮಾಜಿಕ ಜಾಲತಾಣದ ರಚನಾತ್ಮಕ ಅಂಶಗಳ ಬಗ್ಗೆಯೂ ಸಭಿಕರು ಮಾತನಾಡಿದ್ದು, ಜನ ಸಾಮಾನ್ಯರಿಗೆ, ವ್ಯಕ್ತಿಗಳಿಗೆ ತಮ್ಮ ಅಭಿಪ್ರಾಯವನ್ನು, ದೃಷ್ಟಿಕೋನವನ್ನು ಮಂಡಿಸಲು ಸಿಕ್ಕಿರುವ ವೇದಿಕೆ ಇದಾಗಿದೆ ಎಂದು ಹೇಳಿದ್ದಾರೆ.

SCROLL FOR NEXT