ದೇಶ

"ಅವರು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದರು": ಪತ್ರಕರ್ತೆಯರ ವಿರುದ್ಧ ತ್ರಿಪುರಾ ಸಚಿವ

Srinivas Rao BV

ಅಗರ್ತಲಾ: ತ್ರಿಪುರಾದಲ್ಲಿ ಸುಳ್ಳು ಸುದ್ದಿಯ ಮೂಲಕ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದ ಆರೋಪದಡಿ ಇಬ್ಬರು ಪತ್ರಕರ್ತೆಯರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 

ಹೆಚ್ ಡಬ್ಲ್ಯು ನ್ಯೂಸ್ ನೆಟ್ವರ್ಕ್ ನ ಸಮೃದ್ಧಿ ಸಕುನಿಯಾ ಹಾಗೂ ಸ್ವರ್ಣ ಝಾ ತ್ರಿಪುರಾದಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಪತ್ರಕರ್ತೆಯರಾಗಿದ್ದು, ಇವರ ಬಂಧನಕ್ಕೆ  ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತ್ತು. 

ಈ ಬೆಳವಣಿಗೆಗಳ ಬಗ್ಗೆ ತ್ರಿಪುರಾದ ಮಾಹಿತಿ ಹಾಗೂ ಸಂಸ್ಕೃತಿ ಸಚಿವ (ಐಸಿಎ) ಸುಶಾಂತ ಚೌಧರಿ ಪ್ರತಿಕ್ರಿಯೆ ನೀಡಿದ್ದು, ಮಹಿಳಾ ಪತ್ರಕರ್ತೆಯರು ತ್ರಿಪುರಾದಲ್ಲಿನ ಇತ್ತೀಚಿನ ಕೋಮು ಘಟನೆಗಳ ಬಗ್ಗೆ ವರದಿ ಮಾಡಲು ಆಗಮಿಸಿದ್ದರು, ಇವರು ನಿರ್ದಿಷ್ಟ ಪಕ್ಷವೊಂದರ ಏಜೆಂಟ್ ಗಳಾಗಿದ್ದಾರೆ" ಎಂಬ ಗಂಭೀರ ಆರೋಪ ಮಾಡಿದ್ದಾರೆ. 

ಇಬ್ಬರು ವರದಿಗಾರರು ರಾಜ್ಯ ಸರ್ಕಾರದ ವಿರುದ್ಧ ಜನರನ್ನು ಪ್ರಚೋದಿಸುವ ಉದ್ದೇಶ ಹೊಂದಿದ್ದರು ಎಂದು ಸಚಿವರು ಆರೋಪಿಸಿದ್ದಾರೆ. 

"ಪತ್ರಕರ್ತರೆಂದು ಗುರುತಿಸಿಕೊಳ್ಳುವ ಇವರು ನಿರ್ದಿಷ್ಟ ರಾಜಕೀಯ ಪಕ್ಷವೊಂದರ ಏಜೆಂಟ್ ಗಳಾಗಿ ಬಂದಿದ್ದು, ರಾಜ್ಯದಲ್ಲಿ ಕೋಮುಗಲಭೆಯಂತಹ ವಾತಾವರಣ ನಿರ್ಮಿಸಲು ಯತ್ನಿಸಿದ್ದಾರೆ. ನನಗೆ ಅವರು ಪತ್ರಕರ್ತರು ಎಂಬ ಬಗ್ಗೆ ಅನುಮಾನವಿದೆ" ಎಂದು ಹೇಳಿದ್ದಾರೆ.
 
ಇಬ್ಬರೂ ಪತ್ರಕರ್ತರನ್ನು ಅಸ್ಸಾಂ-ತ್ರಿಪುರಾ ಗಡಿ ಭಾಗದ ಕರೀಂ ಗಂಜ್ ನ ನೀಲಂ ಬಜಾರ್ ನಲ್ಲಿ ಅಸ್ಸಾಂ ಪೊಲೀಸರು ಬಂಧಿಸಿದ್ದರು ನಂತರ ಸ್ಥಳೀಯ ನ್ಯಾಯಾಲಯದಲ್ಲಿ ಪತ್ರಕರ್ತೆಯರಿಗೆ ಜಾಮೀನು ದೊರೆತಿದೆ. 

ಪತ್ರಕರ್ತೆಯರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಂತೆ ಅಗರ್ತಲಾದಲ್ಲಿ ಪೊಲೀಸರು ಸೂಚಿಸಿದ್ದರು ಹಾಗೂ ಗೋಮತಿ ಜಿಲ್ಲೆಯ ಕಕ್ರಬನ್ ನಲ್ಲಿ ಪ್ರಕರಣವನ್ನೂ ದಾಖಲಿಸಿದ್ದರು. ಆದರೆ ತಪ್ಪು ಹೇಳಿಕೆ ನೀಡಿ ಯಾರಿಗೂ ತಿಳಿಸದೇ ಅಸ್ಸಾಂ ಮೂಲಕ ಹೊರಡಲು ಪತ್ರಕರ್ತೆಯರು ಯತ್ನಿಸಿದ್ದರು ಎಂದು ಸಚಿವರು ಆರೋಪಿಸಿದ್ದಾರೆ. 

ತ್ರಿಪುರಾದಲ್ಲಿ ಮಸೀದಿ ಮೇಲೆ ದಾಳಿ ನಡೆದಿದೆ ಹಾಗೂ ಕುರಾನ್ ಗೆ ಅಪಚಾರವಾಗಿದೆ ಎಂಬ ಸುಳ್ಳು ಸುದ್ದಿಯನ್ನು ತ್ರಿಪುರಾಗೆ ಬರುವುದಕ್ಕೆ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ನಕಲಿ ಫುಟೇಜ್ ನ್ನು ಬಳಕೆ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದ್ದರು. 

ನಡೆಯದೇ ಇರುವ ಘಟನೆಗೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಹೊರಭಾಗದಲ್ಲಿದ್ದುಕೊಂಡೂ ಹಲವು ಮಂದಿ ಪತ್ರಕರ್ತರು ತ್ರಿಪುರಾದಲ್ಲಿ ನಡೆದೇ ಇಲ್ಲದರ ಬಗ್ಗೆ ಕೆಟ್ಟ ವರದಿಗಳನ್ನು ಪ್ರಕಟಿಸಿದರು ಎಂದು ಚೌಧರಿ ಆರೋಪಿಸಿದ್ದಾರೆ. 
 

SCROLL FOR NEXT