ದೇಶ

ಚೀನಾದೊಂದಿಗಿನ ಉದ್ವಿಗ್ನತೆ ನಡುವೆ ಗಡಿಯಲ್ಲಿ ಭಾರತೀಯ ಸೇನೆ, ಐಎಎಫ್ ಜಂಟಿ ಸಮರಾಭ್ಯಾಸ

Nagaraja AB

ನವದೆಹಲಿ: ಉತ್ತರ ವಲಯದಲ್ಲಿ ಲಾಜಿಸ್ಟಿಕ್ಸ್ ಪೂರೈಕೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಬುಧವಾರ ಜಂಟಿ ಸಮರಾಭ್ಯಾಸ ನಡೆಸಿದವು. ಈ ಕಾರ್ಯಾಚರಣೆಗೆ 'ಆಪರೇಷನ್ ಹರ್ಕ್ಯುಲಸ್' ಎಂದು ಹೆಸರಿಸಡಲಾಗಿತ್ತು.

ಈ ಪ್ರಯತ್ನವು ಭಾರತೀಯ ವಾಯುಪಡೆಯ ಅಂತರ್ಗತ ಹೆವಿ-ಲಿಫ್ಟ್  ಸಾಮರ್ಥ್ಯದ ವಾಸ್ತವ ಪ್ರದರ್ಶನವಾಗಿದೆ. ಈ ಹಿಂದೆ ಯಾವುದೇ ಆಕಸ್ಮಿಕ ಸಂದರ್ಭಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ಹೇಳಿದೆ.

ಏರ್ ಲಿಫ್ಟ್ ಗಾಗಿ ಸಿ-17, ಐಎಲ್ -76 ಮತ್ತು ಎಎನ್ -32 ವಿಮಾನಗಳನ್ನು ಬಳಸಲಾಯಿತು. ಇವುಗಳು ಪೂರ್ವ ಏರ್ ಕಮಾಂಡ್ ವಾಯುನೆಲೆಯಿಂದ ಟೇಕ್ ಆಫ್ ಆದವು. ಮುಂದಿನ 4-5 ತಿಂಗಳುಗಳವರೆಗೆ ಭಾರತದ ಉಳಿದ  ಪ್ರದೇಶಗಳಿಂದ ಈ ಪ್ರದೇಶ ಕಡಿತಗೊಳ್ಳುವುದರಿಂದ ಸಾಕಷ್ಟು ಪಡಿತರ, ಸಂಪನ್ಮೂಲಗಳ ಅಗತ್ಯವಿದೆ. 

ಭಾರತ ಮತ್ತು ಚೀನಾ ಕಡೆಯಿಂದ ಸುಮಾರು 60,000 ಸೈನಿಕರನ್ನು ನಿಯೋಜಿಸುವುದರೊಂದಿಗೆ  ಮೇ 2020 ರಿಂದ ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಈ ಜಂಟಿ ಸಮರಾಭ್ಯಾಸ ನಡೆದಿದ್ದು,  ಈ ಪ್ರದೇಶದಲ್ಲಿ ಟ್ಯಾಂಕ್‌ಗಳು, ಫಿರಂಗಿಗಳು, ಕ್ಷಿಪಣಿಗಳು ಮತ್ತು ಭಾರೀ ಉಪಕರಣಗಳನ್ನು ಇರಿಸಲಾಗಿದೆ.

ಕಳೆದ ತಿಂಗಳು ನಡೆದ ಎರಡು ಮಿಲಿಟರಿಗಳ ಕಾರ್ಪ್ಸ್ ಕಮಾಂಡರ್‌ಗಳ 13 ನೇ ಸುತ್ತಿನ ಮಾತುಕತೆಗಳಲ್ಲಿ ಒಮ್ಮತ ಮೂಡಿರಲಿಲ್ಲ. ಇದರಿಂದಾಗಿ ನಿಯೋಜನೆಗಳು ಮುಂದುವರೆದಿವೆ.  ಮತ್ತೊಂದು ಬೆಳವಣಿಗೆಯಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೇನ್‌ಗುಪ್ತಾ ಅವರು ಈ ತಿಂಗಳ ಅಂತ್ಯದ ವೇಳೆಗೆ ಲೇಹ್ ಮೂಲದ ಹೊಸ ಕಾರ್ಪ್ಸ್ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.

 ಪ್ರಸ್ತುತ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದ ಉಳಿದ ಸಮಸ್ಯೆಗಳನ್ನು ಚರ್ಚಿಸಲು ಲೆಫ್ಟಿನೆಂಟ್ ಜನರಲ್ ಸೆಂಗುಪ್ತಾ ಅವರು ಶೀಘ್ರದಲ್ಲೇ ಚೀನಾದೊಂದಿಗೆ ಕಾರ್ಪ್ಸ್ ಕಮಾಂಡರ್ಸ್ ಮಾತುಕತೆಗಳನ್ನು ನಡೆಸಲಿದ್ದಾರೆ.

SCROLL FOR NEXT