ನವದೆಹಲಿ: ಕಳೆದ ಒಂದೂವರೆ ವರ್ಷದಿಂದ ರೈತರು-ಕೇಂದ್ರ ಸರ್ಕಾರ, ವಿರೋಧ ಪಕ್ಷಗಳ ನಾಯಕರ ಮಧ್ಯೆ ತೀವ್ರ ತಿಕ್ಕಾಟ, ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ 3 ಕೃಷಿ ತಿದ್ದುಪಡೆ ಕಾಯ್ದೆಗಳನ್ನು ವಾಪಸ್ ಪಡೆಯಲಾಗುವುದು ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ಶೂನ್ಯ ಬಜೆಟ್ ನೈಸರ್ಗಿಕ ಕೃಷಿ ವಿಧಾನವನ್ನು ಜಾರಿಗೆ ತರುವುದಾಗಿ ಪ್ರಕಟಿಸಿದ್ದಾರೆ.
ಏನಿದು ಶೂನ್ಯ ಬಜೆಟ್ ನೈಸರ್ಗಿಕ ಕೃಷಿ?: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಇನ್ನಷ್ಟು ದಕ್ಷವಾಗಿ ತರಲು ಮತ್ತು ಇತರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಲಿದೆ. ಅದರಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ರೈತರು, ವಿಜ್ಞಾನಿಗಳು, ಆರ್ಥಿಕ ತಜ್ಞರು ಇರುತ್ತಾರೆ. ದೇಶದ ರೈತರ ಪರವಾಗಿ ನಮ್ಮ ಕೆಲಸ ಮುಂದುವರಿಯುತ್ತದೆ ಎಂದು ಕೂಡ ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: 'ಶೂನ್ಯ ಬಜೆಟ್ ಸಹಜ ಕೃಷಿ' ಜಾರಿ: ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿ ರೈತರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ದೇಶದ ಕೃಷಿ ಕ್ಷೇತ್ರದ ಅವಶ್ಯಕತೆಗಳನ್ನು ಮತ್ತು ಬೆಳೆಗಳನ್ನು ಹೆಚ್ಚಿಸಲು, ಬೆಳೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಬದಲಾಯಿಸಲು ಹೀಗೆ ಎಲ್ಲಾ ವಿಷಯಗಳ ಬಗ್ಗೆ ಭವಿಷ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಈ ಸಮಿಯನ್ನು ರಚಿಸಲಾಗುತ್ತದೆ.
ಇಂದು ರೈತರ ಬಗ್ಗೆ ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದೇನು?: ಇಂದು ಗುರುನಾನಕ್ ಜಯಂತಿ. ದೇಶ ಸೇವೆಯ ಹಾದಿ ಹಿಡಿದರೆ ಮಾತ್ರ ಬದುಕು ಸುಸ್ಥಿತಿಗೆ ಬರಲು ಸಾಧ್ಯ. ನಮ್ಮ ಸರ್ಕಾರವು ಜನರ ಜೀವನವನ್ನು ಸುಲಭಗೊಳಿಸಲು ಈ ಸೇವಾ ಭಾವನೆಯೊಂದಿಗೆ ಕೆಲಸ ಮಾಡುತ್ತಿದೆ.
2014 ರಲ್ಲಿ ನಾನು ಪ್ರಧಾನಿಯಾದಾಗಿನಿಂದ ನಮ್ಮ ಸರ್ಕಾರ ರೈತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುತ್ತಾ ಬಂದಿದ್ದೇವೆ. ಇಂದು ನಮ್ಮ ದೇಶದಲ್ಲಿ 100 ಮಂದಿ ರೈತರಲ್ಲಿ 80ರಷ್ಟು ರೈತರು ಸಣ್ಣ ಹಿಡುವಳಿ ರೈತರಾಗಿದ್ದು 2 ಹೆಕ್ಟೇರ್ ಗಿಂತಲೂ ಕಡಿಮೆ ಭೂಮಿ ಹೊಂದಿದ್ದಾರೆ. ಅಂತವರ ಸಂಖ್ಯೆ 10 ಕೋಟಿಗೂ ಅಧಿಕವಾಗಿದೆ. ಇಷ್ಟು ಸಣ್ಣ ಜಮೀನಿನಲ್ಲಿ ಅವರ ಜೀವನ ಸಾಗಬೇಕು.
ಕಷ್ಟಪಟ್ಟು ಜೀವನ ನಡೆಸುವ ರೈತರ ಕಠಿಣ ಶ್ರಮ ವ್ಯರ್ಥವಾಗಲು ಸರ್ಕಾರ ಬಿಡುವುದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಗ್ರಾಮೀಣ ಮಾರುಕಟ್ಟೆಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುತ್ತೇವೆ. ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ದಾಖಲೆಯ ಮಟ್ಟದಲ್ಲಿ ಸರ್ಕಾರಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಸರ್ಕಾರದಿಂದ ಬೆಳೆಗಳ ಸಂಗ್ರಹಣೆ ಕಳೆದ ಹಲವು ದಶಕಗಳ ದಾಖಲೆಗಳನ್ನು ಮುರಿದಿದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ರೈತರು-ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ, ತೀವ್ರ ಸಂಘರ್ಷಕ್ಕೆ ಎಡೆಮಾಡಿದ್ದ ಆ ಮೂರು ತಿದ್ದುಪಡಿ ಕೃಷಿ ಕಾಯ್ದೆಗಳು ಯಾವುವು?
ರೈತರಿಗೆ ಕೈಗೆಟಕುವ ದರದಲ್ಲಿ ಬೀಜಗಳನ್ನು ಒದಗಿಸಲು ಮತ್ತು ಸೂಕ್ಷ್ಮ ನೀರಾವರಿ, 22 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ಗಳಂತಹ ಸೌಲಭ್ಯಗಳನ್ನು ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಇಂತಹ ಅಂಶಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗಿವೆ. ಫಸಲ್ ಬಿಮಾ ಯೋಜನೆಯನ್ನು ಬಲಪಡಿಸಿದ್ದೇವೆ, ಹೆಚ್ಚಿನ ರೈತರನ್ನು ಅದರ ಅಡಿಯಲ್ಲಿ ತಂದಿದ್ದೇವೆ ಎಂದು ತಮ್ಮ ಸರ್ಕಾರ ರೈತರ ಪರವಾಗಿದೆ ಎಂದು ಹೇಳುವ ಪ್ರಯತ್ನವನ್ನು ಪ್ರಧಾನಿ ಮಾಡಿದರು.
ನಾನು ಏನೇ ಮಾಡಿದರೂ ರೈತರಿಗಾಗಿ ಮಾಡಿದ್ದೇನೆ. ನಾನು ಮಾಡುತ್ತಿರುವುದು ಈ ದೇಶಕ್ಕಾಗಿ. ನಿಮ್ಮ ಆಶೀರ್ವಾದದಿಂದ ನಾನು ನನ್ನ ಶ್ರಮದಲ್ಲಿ ಕೊರತೆಯಾಗದಂತೆ ಮತ್ತು ಕಡಿಮೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. ನಿಮ್ಮ ಕನಸುಗಳು, ರಾಷ್ಟ್ರದ ಕನಸುಗಳು ನನಸಾಗಲು ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡುವುದಾಗಿಯೂ ಪ್ರಧಾನಿ ಭಾಷಣದಲ್ಲಿ ಹೇಳಿದರು.