ದೇಶ

ಲಖೀಂಪುರ್ ಖೇರಿ: ಏರ್ ಪೋರ್ಟ್ ನಲ್ಲಿ ರಾಹುಲ್ ಗಾಂಧಿಗೆ ತಡೆ; ಮೃತರ ಕುಟುಂಬಕ್ಕೆ ಛತ್ತೀಸ್ ಘಡ, ಪಂಜಾಬ್ 50 ಲಕ್ಷ ರೂ. ಪರಿಹಾರ ಘೋಷಣೆ

Srinivasamurthy VN

ಲಖನೌ: ಪ್ರಿಯಾಂಕಾ ಗಾಂಧಿ ಬೆನ್ನಲ್ಲೇ ಇತ್ತ ರಾಹುಲ್ ಗಾಂಧಿ ಪ್ರವೇಶಕ್ಕೂ ಉತ್ತರ ಪ್ರದೇಶ ಪೊಲೀಸರು ತಡೆ ಹಾಕಿದ್ದು, ಲಖನೌ ಏರ್ ಪೋರ್ಟ್ ನಲ್ಲೇ ಕಾಂಗ್ರೆಸ್ ನಾಯಕನಿಗೆ ತಡೆವೊಡ್ಡಿದ್ದಾರೆ.

ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಬಳಿಕ ಉತ್ತರ ಪ್ರದೇಶ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಉತ್ತರ ಪ್ರದೇಶ ಸರ್ಕಾರ ಕಾಂಗ್ರೆಸ್ ನಾಯಕರಿಗೆ ಲಖೀಂಪುರ್ ಖೇರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಖನೌಗೆ ಆಗಮಿಸಿದ್ದು, ಲಖೀಂಪುರ್ ಖೇರಿಗೆ ಭೇಟಿ ನೀಡಲು ಯತ್ನಿಸಿದ್ದಾರೆ. ಈ ವೇಳೆ ಅವರಿಗೆ ಹಲವು ಕಾಂಗ್ರೆಸ್ ನಾಯಕರೂ ಕೂಡ ಸಾಥ್ ನೀಡುತ್ತಿದ್ದಾರೆ.

ಏತನ್ಮಧ್ಯೆ ಲಖನೌ ವಿಮಾನ ನಿಲ್ಗಾಣಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದು, ಈ ವೇಳೆ ಅವರನ್ನು ವಿಮಾನ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ.  ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ನನಗೆ ಉತ್ತರ ಪ್ರದೇಶ ಸರ್ಕಾರ ಎಂತಹ ಅನುಮತಿ ನೀಡಿದೆ ಎಂದು ತಿಳಿಯುತ್ತಿಲ್ಲ. ಗೃಹ ಇಲಾಖೆ ಲಖೀಂಪುರಕ್ಕೆ ಹೋಗಲು ಅನುಮತಿ ನೀಡಿದೆ ಎನ್ನಲಾಗಿದೆ. ಆದರೆ ಇಲ್ಲಿ ನನಗೆ ಲಖೀಂಪುರ್ ಖೇರಿಗೆ ತೆರಳಲು ಬಿಡುತ್ತಿಲ್ಲ. ನಾನು ನನ್ನ ಸ್ವಂತ ವಾಹನದಲ್ಲೇ ತೆರಳು ಸಿದ್ಧ. ನಮಗೆ ಅದೆತಂಹ ಅನುಮತಿ ನೀಡಿದ್ದಾರೆ ಎಂಬುದು ತಿಳಿಯಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

50 ಲಕ್ಷ ರೂ ಪರಿಹಾರ ಘೋಷಣೆ
ಇನ್ನು ಅದೇ ತಂಡದಲ್ಲಿದ್ದ ಛತ್ತೀಸ್ ಘಡ ಸಿಎಂ ಭೂಪೇಶ್ ಬಘೇಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮೃತ ರೈತರ ಕುಟುಂಬಕ್ಕೆ ಮತ್ತು ಎಸ್ ಯುವಿನಿಂದಾಗಿ ಸಾವಿಗೀಡಾದ ಪತ್ರಕರ್ತನ ಕುಟುಂಬಕ್ಕೆ ತಲಾ 50 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು. 

ಅಂತೆಯೇ ಇತ್ತ ಪಂಜಾಬ್ ಸರ್ಕಾರ ಕೂಡ ಮೃತ ರೈತರ ಕುಟುಂಬಗಳಿಗೆ ತಲಾ 50 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಲಖನೌಗೆ ತೆರಳಿರುವ ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಅವರು ತಮ್ಮ ಸರ್ಕಾರದ ವತಿಯಿಂದ ಮೃತ ರೈತರ ಕುಟುಂಬಗಳಿಗೆ ತಲಾ 50 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.

ಈ ವೇಳೆ ಮಾತನಾಡಿದ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಅವರು, ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣ ತಮಗೆ 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನಪಿಸಿತು ಎಂದು ಹೇಳಿದ್ದಾರೆ. ಅಂತೆಯೇ ಉತ್ತರ ಪ್ರದೇಶ ಸರ್ಕಾರ ಪ್ರಜಾಪ್ರಭುತ್ವನ್ನು ಅಣಕಿಸುತ್ತಿದೆ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಹಿರಿಯ ನಾಯಕರಾದ ಕೆಸಿ ವೇಣುಗೋಪಾಲ್, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಮತ್ತು ಛತ್ತೀಸ್ ಘಡ ಸಿಎಂ ಭೂಪೇಶ್ ಬಘೇಲ್ ಅವರು ಉಪಸ್ಥಿತರಿದ್ದಾರೆ.
 

SCROLL FOR NEXT