ದೇಶ

ಕ್ರೂಸ್ ಡ್ರಗ್ಸ್ ಪ್ರಕರಣ: ಬಿಜೆಪಿ ನಾಯಕನ ಸಂಬಂಧಿ, ಇತರ ಇಬ್ಬರ ಬಿಡುಗಡೆ ಕುರಿತು ತನಿಖೆ ನಡೆಸಿ; ಸಚಿವ ನವಾಬ್ ಮಲಿಕ್ ಒತ್ತಾಯ

Lingaraj Badiger

ಮುಂಬೈ: ಮುಂಬೈನ ಮಾಜಿ ಬಿಜೆಪಿ ಯುವ ಘಟಕದ ಅಧ್ಯಕ್ಷ ಮೋಹಿತ್ ಕುಂಭೋಜ್ ಅವರ ಸಂಬಂಧಿ ರಿಷಬ್ ಸಚ್‌ದೇವ ಮತ್ತು ಇತರ ಇಬ್ಬರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಬಿಡುಗಡೆ ಮಾಡಿದ ಬಗ್ಗೆ ತನಿಖೆ ನಡೆಸಬೇಕು ಎಂದು ಎಂದು ಎನ್‌ಸಿಪಿ ಮುಖ್ಯ ವಕ್ತಾರ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಶನಿವಾರ ಒತ್ತಾಯಿಸಿದ್ದಾರೆ.

ಕ್ರೂಸ್ ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧನವಾಗಿದ್ದ ರಿಷಬ್ ಸಚ್ ದೇವ್ ಮತ್ತು ಇತರ ಇಬ್ಬರನ್ನು ನಂತರ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿರುವ 

ಮಲಿಕ್, ಇವರನ್ನು ಹೇಗೆ ಬಂಧಿಸಲಾಯಿತು ಮತ್ತು ನಂತರ ಹೇಗೆ ಬಿಡುಗಡೆ ಮಾಡಲಾಯಿತು ಎಂದು ಮುಂಬೈ ಪೊಲೀಸರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಎನ್‌ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರು ಅಕ್ಟೋಬರ್ 3 ರಂದು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ 8 ರಿಂದ 10 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು. ಆದರೆ ಅವರು ಎಂಟು ಜನರನ್ನು ಮಾತ್ರ ಬಂಧಿಸಿದ್ದಾರೆ. ಆದಾಗ್ಯೂ, ಅಧಿಕೃತ ದಾಖಲೆಯ ಪ್ರಕಾರ 11 ಜನರನ್ನು ಬಂಧಿಸಲಾಗಿದೆ. ಆದರೆ ಅವರಲ್ಲಿ ಮೂವರು - ರಿಷಬ್ ಸಚ್‌ದೇವ, ಪ್ರತೀಕ್ ಗಣಭನ ಮತ್ತು ಅಮೀರ್ ಫರ್ನಿಚರ್‌ವಾಲಾ ಅವರನ್ನು ಮುಂಬೈ ಮತ್ತು ದೆಹಲಿಯಿಂದ ಕರೆ ಮಾಡಿದ ನಂತರ ಬಿಡುಗಡೆ ಮಾಡಲಾಗಿದೆ. ಈ ಮೂವರನ್ನು ಬಿಡಲು ಸಮೀರ್ ವಾಂಖೆಡೆಗೆ ಯಾರು ಕರೆ ಮಾಡಿದರು ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಅವರ ಫೋನ್ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮಲಿಕ್ ಆಗ್ರಹಿಸಿದ್ದಾರೆ.

ಈ ಪ್ರಕರಣದ ಕ್ರೂಸ್ ಮತ್ತು ಸಂಪರ್ಕಿತ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಬೇಕು ಮತ್ತು ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರ ಫೋನ್ ಕರೆಗಳನ್ನು ಪರಿಶೀಲಿಸಬೇಕು ಎಂದು ಮಹಾ ಸಚಿವ ಒತ್ತಾಯಿಸಿದ್ದಾರೆ.

ರಿಷಭ್ ಸಚ್‌ದೇವ ಅವರ ಕುಟುಂಬ ಸದಸ್ಯರು ಕೂಡ ಎನ್‌ಸಿಬಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ಎನ್‌ಸಿಬಿ ಕಚೇರಿ ಪ್ರವೇಶಿಸಲು ಅವರಿಗೆ ಹೇಗೆ ಅನುಮತಿ ನೀಡಲಾಯಿತು? ಶಾರುಖ್ ಖಾನ್ ಅವರನ್ನು ಗುರಿಯಾಗಿಸಲು ನಡೆದ ನಕಲಿ ಡ್ರಗ್ಸ್ ಪ್ರಕರಣ ಎಂದು ತೋರುತ್ತಿದೆ" ಎಂದು ಮಲಿಕ್ ಆರೋಪಿಸಿದ್ದಾರೆ.

SCROLL FOR NEXT