ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಲ್ಲದವರನ್ನು ಹಾಗೂ ಅಲ್ಪಸಂಖ್ಯಾತರನ್ನು ಭಯೋತ್ಪಾದಕರು ಹತ್ಯೆ ಮಾಡುತ್ತಿರುವುದರಿಂದ ಆತಂಕಗೊಂಡ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ಮಂಗಳವಾರ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಟಿಕೆಟ್ ಕೌಂಟರ್ ಗಳ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು, ಉಧಂಪುರದ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಏಕೆಂದರೆ ಅಲ್ಲಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರ ಹೋಗಲು ಹವಣಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಮತ್ತೆ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಕೊಂದ ಉಗ್ರರು
ಜಮ್ಮುವಿನ ರೈಲ್ವೆ ನಿಲ್ದಾಣದ ಹೊರಗೆ, ಪುರುಷರು, ಮಹಿಳೆಯರು ಮತ್ತು ಮಕ್ಕಳು ನೀರು ಅಥವಾ ಆಶ್ರಯ ಇತರ ಮೂಲ ಸೌಕರ್ಯಗಳಿಲ್ಲದೆ ಉದ್ದದ ಸರತಿ ಸಾಲಿನಲ್ಲಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದರು.
"ಇದು ಕಾಶ್ಮೀರಕ್ಕೆ ಕೊನೆಯ ಭೇಟಿ. ನನ್ನ ಜೀವನೋಪಾಯಕ್ಕಾಗಿ ನಾನು ಮತ್ತೆ ಇಲ್ಲಿಗೆ ಬರುವುದಿಲ್ಲ" ಎಂದು ಚತ್ತೀಸ್ಗಢದ ಕಾರ್ಮಿಕ ಮಿಂಟು ಸಿಂಗ್ ಹೇಳಿದ್ದಾರೆ.
ಆತನಂತೆಯೇ ಹಲವು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ಕಣಿವೆಯಿಂದ ಪಲಾಯನ ಮಾಡುತ್ತಿವೆ. ಕಳೆದ ಎರಡು ವಾರಗಳಲ್ಲಿ ಭಯೋತ್ಪಾದಕರು 11 ವಲಸೆ ಕಾರ್ಮಿಕರನ್ನು ಹತ್ಯೆ ಮಾಡಿದ ನಂತರ ನಾವು "ನರಕ" ಅನುಭವಿಸಿದ್ದೇವೆ. ಮತ್ತೆ ಯಾವುದೇ ಕಾರಣಕ್ಕೂ ಕಾಶ್ಮೀರಕ್ಕೆ ಬರುವುದಿಲ್ಲ ಎಂದಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಇಟ್ಟಿಗೆ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಬೆಸಂಗೋವಾನ್ನ ಅಜಯ್ ಕುಮಾರ್ ಅವರು ತಮ್ಮ ಪತ್ನಿ ಸರಿತಾ ಮತ್ತು ಇಬ್ಬರು ಮಕ್ಕಳೊಂದಿಗೆ ತವರಿಗೆ ತೆರಳಲು ಜಮ್ಮು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದರು. ತನ್ನ ಮಾಲೀಕ 27,000 ರೂಪಾಯಿ ಬಾಕಿ ವೇತನದಲ್ಲಿ ನೀಡಲು ನಿರಾಕರಿಸಿದರು ಎಂದು ಅಜಯ್ ಕುಮಾರ್ ತಮ್ಮ ಅಳಲು ತೋಡಿಕೊಂಡರು.