ದೇಶ

ಮುಂಬೈ ಅಗ್ನಿ ಅವಘಡ: ವಸತಿ ಕಟ್ಟಡದ ಮಾಲೀಕರ ಬಂಧಿಸಿದ ಪೊಲೀಸರು

Srinivasamurthy VN

ಮಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿನ ವಸತಿ ಕಟ್ಟಡದಲ್ಲಿ ಸಂಭವಿಸಿದ್ದ ಭೀಕರ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಮುಂಬೈ ಪೊಲೀಸರು ವಸತಿ ಕಟ್ಟಡ ಮಾಲೀಕರನ್ನು ಬಂಧಿಸಿದ್ದಾರೆ.

ಸೆಂಟ್ರಲ್ ಮುಂಬೈನ ಕರ್ರಿ ರೋಡ್ ಪ್ರದೇಶದಲ್ಲಿರುವ 61 ಅಂತಸ್ತಿನ ವಸತಿ ಕಟ್ಟಡದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಟ್ಟಡ ಮಾಲೀಕರನ್ನು ಬಂಧಿಸಿದ್ದಾರೆ. ನಿನ್ನೆ ಮಧ್ಯಾಹ್ನ ಕಟ್ಟಡದ 19 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಈ ವೇಳೆ ಬೆಂಕಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವ್ಯಕ್ಕಿಯೊಬ್ಬರು ಬಾಲ್ಕನಿಯಿಂದ ಸಾವನ್ನಪ್ಪಿದ್ದರು.  

ಇದೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದು, ಇಲ್ಲಿನ ಕಾಲಾಚೌಕಿ ಪೊಲೀಸ್ ಠಾಣೆಯಲ್ಲಿ ಮಹಾರಾಷ್ಟ್ರ ಅಗ್ನಿಶಾಮಕ ತಡೆಗಟ್ಟುವಿಕೆ ಮತ್ತು ಜೀವ ಸುರಕ್ಷತೆ ಕ್ರಮಗಳ ಕಾಯಿದೆಯ ಅಡಿಯಲ್ಲಿ ಕಟ್ಟಡದ ಮಾಲೀಕರು, ಅದರ ನಿವಾಸಿ, ಅಗ್ನಿಶಾಮಕ ಸುರಕ್ಷತಾ ನಿರ್ವಹಣೆ ಗುತ್ತಿಗೆದಾರ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳು 336 (ಮಾನವ ಜೀವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯ), 304 (ಎ) (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಒನ್ ಅವಿಘ್ನ ಪಾರ್ಕ್ ಕಟ್ಟಡದ 19ನೇ ಮಹಡಿಯಲ್ಲಿ ಶುಕ್ರವಾರ ಬೆಳಗ್ಗೆ 11.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳ ಇದನ್ನು ಲೆವೆಲ್-4 (ಪ್ರಮುಖ) ಬೆಂಕಿ ಅವಘಡ ಎಂದು ವರ್ಗೀಕರಿಸಿತ್ತು.  ಈ ಘಟನೆಯಲ್ಲಿ ಕಟ್ಟಡದ 30 ವರ್ಷ ವಯಸ್ಸಿನ ಭದ್ರತಾ ಸಿಬ್ಬಂದಿ ಅರುಣ್ ತಿವಾರಿ ಎಂಬುವವರು, ಆ ಮಹಡಿಯಲ್ಲಿನ ಫ್ಲಾಟ್‌ನಲ್ಲಿ ಸಿಲುಕಿಕೊಂಡಿದ್ದರು ಮತ್ತು ತಮ್ಮನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ, ಅವರು ಬಾಲ್ಕನಿಯ ರೇಲಿಂಗ್ ಅನ್ನು ಹಿಡಿದಿದ್ದರು. ಆದರೆ ಹಿಡಿತ ಸಿಗದೇ ಅವರು ಕೆಳಗೆ ಬಿದ್ದು ಸಾವನ್ನಪ್ಪಿದ್ದರು.

ಅಂತೆಯೇ ಈ ಘಟನೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಟ್ಟಡದೊಳಗೆ ಸಿಲುಕಿದ್ದ 16 ಮಂದಿಯನ್ನು ರಕ್ಷಿಸಿದ್ದಾರೆ.
 

SCROLL FOR NEXT