ದೇಶ

ಆರೆಸ್ಸೆಸ್ ಪತ್ರಿಕೆಯಲ್ಲಿ ಇನ್ ಫೋಸಿಸ್ ವಿರುದ್ಧ ಬರಹ: ವಿವಾದದಿಂದ ಅಂತರ ಕಾಯ್ದುಕೊಂಡ ಕೇಸರಿ ಸಂಘಟನೆ

Harshavardhan M

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತದ ಸಾಫ್ಟ್ ವೇರ್ ಉದ್ಯಮದ ದಿಗ್ಗಜ ಸಂಸ್ಥೆ ಬೆಂಗಳೂರು ಮೂಲದ ಇನ್ಫೋಸಿಸ್ ವಿರುದ್ಧ ಪಾಂಚಜನ್ಯ ಪತ್ರಿಕೆಯಲ್ಲಿ ಬಂದ ಬರಹಕ್ಕೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದಿದೆ. 

ಕೇಸರಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ 'ಪಾಂಚಜನ್ಯ' ಪತ್ರಿಕೆಯಲ್ಲಿ ಇನ್ ಫೋಸಿಸ್ ವಿರುದ್ಧ ಬರಹವೊಂದು ಪ್ರಕಟಗೊಂಡಿತ್ತು.  ಅದರಲ್ಲಿ ಇನ್ಫೋಸಿಸ್ ಸಂಸ್ಥೆ ಮತ್ತು ಅದರ ಸ್ಥಾಪಕ ನಾರಾಯಣ ಮೂರ್ತಿ ಅವರ ಗೌರವಕ್ಕೆ ಧಕ್ಕೆ ತರುವಂಥ ರೀತಿಯಲ್ಲಿ ಬರೆಯಲಾಗಿತ್ತು. 

ಇನ್ ಫೋಸಿಸ್ ಸಂಸ್ಥೆ ದೇಶ ವಿದ್ರೋಹಿ ಶಕ್ತಿಗಳೊಂದಿಗೆ ಶಾಮೀಲಾಗಿದೆ ಎಂದು ಆರೋಪಿಸಲಾಗಿತ್ತು. ಅದರಿಂದಾಗಿಯೇ ಸರ್ಕಾರದ ಆದಾಯ ತೆರಿಗೆ ಪಾವತಿ ಜಾಲತಾಣ ಸಮಸ್ಯೆಗೆ ಸಿಲುಕಿದೆ ಎಂದು ಹೇಳಲಾಗಿತ್ತು. ಸರ್ಕಾರದ ಇನ್ಕಂ ಟ್ಯಾಕ್ಸ್ ವೆಬ್ ಸೈಟನ್ನು ಇನ್ ಫೋಸಿಸ್ ಅಭಿವೃದ್ಧಿ ಪಡಿಸಿತ್ತು. ಅದರ ನಿರ್ವಹಣೆಯೂ ಅದರದ್ದೇ ಹೊಣೆ. ಈ ಹಿಂದೆ ಜಾಲತಾಣದಲ್ಲಿ ಬಳಕೆದಾರರು ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಅದನ್ನು ಉದಾಹರಿಸಿ ಲೇಖನದಲ್ಲಿ ಇನ್ ಫೋಸಿಸ್ ವಿರುದ್ಧ ಕೆಟ್ಟದ್ದಾಗಿ ಬಿಂಬಿಸಲಾಗಿತ್ತು.

ಪಾಂಚಜನ್ಯ ಪತ್ರಿಕೆ ಆರೆಸ್ಸೆಸ್ ಸಂಘಟನೆಯ ಮುಖವಾಣಿಯಲ್ಲ ಎಂದು ಸಂಘಟನೆಯ ಅಖಿಲ ಭಾರತ ಪ್ರಚಾರ್ ಪ್ರಮುಖ್ ಸುನಿಲ್ ಅಂಬೆಕರ್ ಹೇಳಿದ್ದಾರೆ. ಅಲ್ಲದೆ ಲೇಖನದಲ್ಲಿರುವ ಅಭಿಪ್ರಾಯ ಕೇವಲ ಬರಹಗಾರರದ್ದೇ ಹೊರತು ಪತ್ರಿಕೆಯದ್ದಲ್ಲ ಎಂದೂ ಹೇಳಿ ವಿವಾದದಿಂದ ಅಂತರ ಕಾಯ್ದುಕೊಂಡಿದ್ದಾರೆ.

SCROLL FOR NEXT