ಲಖನೌ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಮ್ಮ ಅರ್ಜಿಗಳೊಂದಿಗೆ 11,000 ರೂ.ಗಳನ್ನು ಠೇವಣಿ ಮಾಡುವಂತೆ ಉತ್ತರ ಪ್ರದೇಶ ಕಾಂಗ್ರೆಸ್ ಸೂಚಿಸಿದೆ.
ಗಂಭೀರವಾಗಿಲ್ಲದ ಅಭ್ಯರ್ಥಿಗಳನ್ನು ದೂರವಿಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
"ಎಲ್ಲಾ ಅರ್ಜಿದಾರರು ತಮ್ಮ ಅರ್ಜಿಗಳನ್ನು ಜಿಲ್ಲಾ/ರಾಜ್ಯ ಮಟ್ಟದಲ್ಲಿ ಅಧಿಕೃತ ವ್ಯಕ್ತಿಗಳೊಂದಿಗೆ 'ಸಹಯೋಗ ರಾಶಿ(ಕೊಡುಗೆ ಮೊತ್ತ)' 11,000 ರೂ. ಅನ್ನು ಸೆಪ್ಟೆಂಬರ್ 25, 2021 ರೊಳಗೆ ಸಲ್ಲಿಸಬೇಕು" ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ(ಯುಪಿಸಿಸಿ) ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರು ಮಂಗಳವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಉತ್ತರ ಪ್ರದೇಶ ಚುನಾವಣೆ; ಯಾರೊಂದಿಗೂ ಮೈತ್ರಿ ಇಲ್ಲ: ಸಲ್ಮಾನ್ ಖುರ್ಷಿದ್
ಪಕ್ಷವು ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ಚಿಂತನಶೀಲ ಅಧಿವೇಶನದ ನಂತರ ಕಳೆದ ವಾರ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು.
"ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಕಾರ್ಯಕರ್ತರು ರಾಜ್ಯ ಅಥವಾ ಜಿಲ್ಲಾ ಕೇಂದ್ರದಲ್ಲಿ ತಮ್ಮ ಅರ್ಜಿಗಳನ್ನು ನೀಡಬಹುದು" ಎಂದು ಕಾಂಗ್ರೆಸ್ ವಕ್ತಾರರಾದ ಡಾ ಉಮಾ ಶಂಕರ್ ಪಾಂಡೆ ಶನಿವಾರ ಹೇಳಿದ್ದಾರೆ.