ದೇಶ

ಮುಂಬೈನಲ್ಲಿ 10 ದಿನಗಳ ಗಣೇಶೋತ್ಸವಕ್ಕೆ ತೆರೆ: ಒಂದೇ ದಿನ 34,000 ವಿಗ್ರಹ ವಿಸರ್ಜನೆ, 3 ಯುವಕರು ನೀರು ಪಾಲು 

Srinivas Rao BV

ಮುಂಬೈ: ಸಾರ್ವಜನಿಕ ಗಣೇಶೋತ್ಸವಕ್ಕೆ ಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಮುಂಬೈ ನಲ್ಲಿ ಗಣೇಶೋತ್ಸವದ ಕೊನೆಯ ದಿನದಂದು ಬರೋಬ್ಬರಿ 34,452 ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗಿದೆ. ಎರಡನೇ ವರ್ಷ ಕೋವಿಡ್ ಕರಿನೆರಳಿನಲ್ಲಿ ಗಣೇಶ ಹಬ್ಬ ನಡೆದಿದೆ.

ಗಣೇಶ ವಿಸರ್ಜನೆಯ ವೇಳೆ ಅಲ್ಲಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿರುವುದು ವಾರದಿಯಾಗಿದೆ. ವರ್ಸೋವಾ ಜೆಟ್ಟಿಯಲ್ಲಿ ಗಣೇಶನ ವಿಗ್ರಹವನ್ನು ನೀರಿಗೆ ಬಿಡುವ ವೇಳೆ ಭಾನುವಾರ ರಾತ್ರಿ ಸಮುದ್ರದ ನೀರಿನಲ್ಲಿ ಮೂವರು ಯುವಕರು ಕೊಚ್ಚಿ ಹೋಗಿದ್ದರು ಈ ಯುವಕರಿಗಾಗಿ ಶೋಧಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಈ ಮೂವರು ಯುವಕರ ಜೊತೆ ತೆರಳಿದ್ದ ಇನ್ನಿಬ್ಬರು ಯುವಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ಹೊರತಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.

ಬೃಹತ್ ಮುಂಬೈ ನಗರ ಪಾಲಿಕೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಭಾನುವಾರ ಒಂದೇ ದಿನ 34,452 ಗಣಪತಿ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗಿದೆ. ಇನ್ನು ನೈಸರ್ಗಿಕ ಜಲ ಮೂಲಗಳ ಬಳಿ ಜನ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದ್ದ ಕೃತಕ ಕೆರೆಗಳಲ್ಲಿ, 13,442 ಗಣೇಶಗಳನ್ನು ವಿಸರ್ಜನೆ ಮಾಡಲಾಗಿದೆ.

ಒಟ್ಟಾರೆ ವಿಸರ್ಜನೆಗೊಂಡ ಗಣೇಶ ವಿಗ್ರಹಗಳ ಪೈಕಿ 5,403 ವಿಗ್ರಹಗಳು ಸಾರ್ವಜನಿಕ ಮಂಡಳದ್ದಾಗಿದ್ದು 29,060 ವಿಗ್ರಹಗಳು ಮನೆಗಳದ್ದಾಗಿವೆ. 349 ಗೌರಿಯಾದ್ದಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೃತಕ ಕೆರೆಗಳಲ್ಲಿ 11,387ಮನೆಗಳ ಗಣಪತಿ ವಿಸರ್ಜನೆಗೊಂಡಿದ್ದರೆ, 1,890 ಸಾರ್ವಜನಿಕ ಮಂಡಲದ್ದಾಗಿವೆ.

ಪ್ರಸಿದ್ಧ ಲಾಲ್ ಬಾಗ್ ಚಾ ರಾಜ ಗಣೇಶ ವಿಗ್ರಹವನ್ನು ಮಧ್ಯಾಹ್ನ ಮೂರು ಗಂಟೆಗೆ ಗಿರ್ ಗಾವ್ ಚೌಪಟ್ಟಿಯಲ್ಲಿ ವಿಸರ್ಜನೆ ಮಾಡಲಾಯಿತು.

ಬಿಎಂಸಿ ಮುನ್ನಚ್ಚರಿಕ ಕ್ರಮವಾಗಿ 715 ಜೀವರಕ್ಷಕಗಳನ್ನು ಕೃತಕ ಹಾಗೂ ನೈಸರ್ಗಿಕ ಕೆರೆಗಳಲ್ಲಿ ನಿಯೋಜಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT